ಗೋಕಾಕ:ಸೆ.1 ರಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ , ಪ್ರತಿ ಟನ್ ಕಬ್ಬಿಗೆ 2700 ರೂ : ಮಾಜಿ ಸಚಿವ ಬಾಲಚಂದ್ರ
ಸೆ.1 ರಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ , ಪ್ರತಿ ಟನ್ ಕಬ್ಬಿಗೆ 2700 ರೂ : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಅ 30 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸೆ.1 ರಿಂದ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಲಿದ್ದು, ಪ್ರತಿ ಟನ್ ಕಬ್ಬಿಗೆ 2700 ರೂ. ನೀಡಲಾಗುವುದು ಎಂದು ಕಾರ್ಖಾನೆಯ ಮಾರ್ಗದರ್ಶಕ, ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು.
ಅವರು ಬುಧವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸಮುದಾಯ ಭವನದಲ್ಲಿ ಜರುಗಿದ ರೈತರ ಸಭೆಯಲ್ಲಿ ಮಾತನಾಡಿದರು.
ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಕೇವಲ 7 ದಿನಗಳೊಳಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದ ಅವರು
ಮಾರುಕಟ್ಟೆಯಲ್ಲಿ ಸಕ್ಕರೆ ದರ ಪ್ರತಿ ಕ್ವಿಂಟಲ್ಗೆ 3600 ರೂ. ಇರುವುದರಿಂದ ಪ್ರಸಕ್ತ ಸಾಲಿಗೆ ಕಬ್ಬು ಪೂರೈಕೆ ಮಾಡುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ.ಗಳು ಹಾಗೂ ಸಾರಿಗೆ ಮತ್ತು ಕಬ್ಬು ಮುಕ್ತೆದಾರರಿಗೆ 550 ರೂ. ಸೇರಿ ಒಟ್ಟು 3250 ರೂ.ಗಳನ್ನು ಕಾರ್ಖಾನೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿರುವ ಈ ಕಾರ್ಖಾನೆಯು ರೈತರ ಏಳ್ಗೆಗೆ ಸದಾ ಬದ್ಧವಿದೆ. ರೈತರ ಸಮಗ್ರ ಪ್ರಗತಿಯೇ ನಮ್ಮ ಧ್ಯೇಯವಾಗಿದ್ದು, ರೈತರ ಹಿತಾಸಕ್ತಿಗನುಗುಣವಾಗಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಲಾಭಕ್ಕಾಗಿ ಕಾರ್ಖಾನೆ ನಡೆಸುತ್ತಿಲ್ಲ. ರೈತರ ಸರ್ವತೋಮುಖ ಏಳ್ಗೆಯು ಇದರಲ್ಲಿ ಸೇರಿದೆ. ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸುಮಾರು 1.60 ಕೋಟಿ ಟನ್ ಕಬ್ಬು ಬೆಳೆಯಲಾಗುತ್ತಿದೆ. ಬಹುತೇಕ ಕಾರ್ಖಾನೆಗಳು ನಾವು ನೀಡುವ ದರವನ್ನು ಆಧರಿಸಿಕೊಂಡು ರೈತರಿಗೆ ಕಬ್ಬಿನ ದರ ನಿಗದಿಪಡಿಸುತ್ತಿವೆ. ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ರೂ. 2600 ನೀಡುವಂತೆ ಕೇಂದ್ರ ಸರ್ಕಾರ ನಿಗದಿ ಮಾಡಿದೆಯಾದರೂ ಕಾರ್ಖಾನೆಗೆ ಆಧಾರ ಸ್ತಂಭವಾಗಿರುವ ರೈತರ ಹಿತದೃಷ್ಟಿಯಿಂದ 2700 ರೂ. ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
2015-16ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ 200 ರೂ. ವ್ಯತ್ಯಾಸ ಬಿಲ್ಲನ್ನು ನೀಡಿದ್ದು, ಬಾಕಿ ಉಳಿದ ರೈತರ ಬಿಲ್ಲನ್ನು ಸಂದಾಯ ಮಾಡಲಾಗುವುದು. 2012-13ನೇ ಸಾಲಿನ ಹಂಗಾಮಿನಲ್ಲಿ ಸಾರಿಗೆ ಮತ್ತು ತೋಡ್ನಿ ಬಿಲ್ಲು 80 ಲಕ್ಷ ರೂ.ಗಳು ಬಾಕಿ ಇದ್ದು ಈ ಹಣವನ್ನು ಸಹ ರೈತರ ಬ್ಯಾಂಕ್ ಖಾತೆಗಳಿಗೆ ತಿಂಗಳೊಳಗೆ ಜಮೆ ಮಾಡಲಾಗುವುದು ಎಂದು ಅವರು ಹೇಳಿದರು.
ಕಾರ್ಖಾನೆಯ ಉಳಿವಿಗಾಗಿ ರೈತರು ಎಂದಿನಂತೆ ಸಹಕಾರ ನೀಡಿ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿ ನಮಗೆ ಶಕ್ತಿ ನೀಡಬೇಕು. ನಿಮ್ಮ ಆಶೀರ್ವಾದವೇ ನಮ್ಮ ಕಾರ್ಖಾನೆಗೆ ಶ್ರೀರಕ್ಷೆಯಾಗಿದೆ. ನೀವೇ ನಮಗೆ ದೊಡ್ಡ ಶಕ್ತಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರ ಕೊಡುಗೆಯನ್ನು ಶ್ಲಾಘಿಸಿದರು.
ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ, ಟಿಎಪಿಎಸಿಎಂಎಸ್ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ(ಕಲ್ಲೋಳಿ), ಕೆಂಚಗೌಡ ಪಾಟೀಲ, ಮಹಾಂತೇಶ ಕಪ್ಪಲಗುದ್ದಿ, ಶಿವಲಿಂಗ ಪೂಜೇರಿ, ರಾಮಣ್ಣಾ ಬಂಡಿ, ಲಕ್ಷ್ಮಣ ಗಣಪ್ಪಗೋಳ, ಗಿರೀಶ ಹಳ್ಳೂರ, ಕೃಷ್ಣಪ್ಪ ಬಂಡ್ರೊಳ್ಳಿ, ಮಲ್ಲಿಕಾರ್ಜುನ ಕಬ್ಬೂರ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಸಹಕಾರಿಗಳು, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ರಂಜನಗಿ ಉಪಸ್ಥಿತರಿದ್ದರು.
ಸಿ.ಡಿ.ಓ ಜೆ.ಆರ್. ಬಬಲೇಶ್ವರ ಸ್ವಾಗತಿಸಿದರು.