ಗೋಕಾಕ: ಹಳೆಯ ಸಾಲ ಮರುಪಾವತಿಗೆ ನೋಟಿಸ್ : ಬ್ಯಾಂಕಿನ ಎದುರು ರೈತ ಸಂಘದಿಂದ ಪ್ರತಿಭಟನೆ
ಹಳೆಯ ಸಾಲ ಮರುಪಾವತಿಗೆ ನೋಟಿಸ್ : ಬ್ಯಾಂಕಿನ ಎದುರು ರೈತ ಸಂಘದಿಂದ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 21 :
ಟ್ರಾಕ್ಟರ್ ಮೇಲೆ ಪಡೆದಿದ್ದ ಸಾಲ ಪಾವತಿಯಾಗಿದ್ದರು, ಸಾಲ ಬಾಕಿ ಇದೆ ಎಂದು ಬ್ಯಾಂಕಿನವರು ನೀಡಿದ ನೋಟಿಸಿನ ಹಿನ್ನಲೆಯಲ್ಲಿ ರೈತ ಸಂಘದವರು ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರದಂದು ಜರುಗಿದೆ.
ನಗರದ ಸಿಂಡಿಕೇಟ್ ಬ್ಯಾಂಕಿನ ಮುಂದೆ ಸೇರಿದ ರೈತ ಸಂಘದ ಕಾರ್ಯಕರ್ತರು ಬ್ಯಾಂಕಿನ ವಿರುದ್ಧ ಘೋಷಣೆ ಕೂಗಿ, ಬ್ಯಾಂಕ್ ಅಧಿಕಾರಗಳ ಬಗ್ಗೆ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮುಖಂಡರಾದ ಮಹಾದೇವ ಗೋಡೇರ, ಶಂಕರ ಮದಿಹಳ್ಳಿ, ಪ್ರಕಾಶ ಹಾಲನ್ನವರ, ಶಿವು ಪಾಟೀಲ, ಮುತ್ತೆಪ್ಪ ಮದಿಹಳ್ಳಿ, ಹೊಳೆಪ್ಪ ಉದ್ಯಾಗೋಳ ಸೇರಿದಂತೆ ಅನೇಕರು ಇದ್ದರು.
ಹಿನ್ನಲೆ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಹೇಶಕುಮಾರ ಭೀಮಪ್ಪ ಹೊರಟ್ಟಿ ಎಂಬ ರೈತ ಸನ್ 2005 ರಲ್ಲಿ ಟ್ಯಾಕ್ಟರ್ ಮೇಲೆ ಸಾಲ ಪಡೆದಿದ್ದನ್ನು, ಮರಳಿ ಸಾಲವನ್ನು ಕಂತುಗಳಲ್ಲಿ ಪಾವತಿ ವಿಳಂಬವಾದ್ದರಿಂದ ಬ್ಯಾಂಕಿನವರು ಟ್ಯಾಕ್ಟರ ಹಾಗೂಈ ಟ್ರೇಲರ್ ಜಪ್ತಿ ಮಾಡಿ ಸನ್ 2008 ರಲ್ಲಿ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಿ ಸಾಲವನ್ನು ಪಾವತಿಸಿಕೊಂಡ ಉಳಿದ ಬಾಕಿ ಹಣವನ್ನು ರೈತನ ಖಾತಗೆ ಜಮೆ ಮಾಡಿದ್ದರು. ಆದರೆ ಕಳೆದ ಡಿಸೆಂಬರ್ 19 ರಂದು ರೈತನಿಗೆ ಸಾಲದ ಖಾತೆ ನಂ 5118540003307 ಅನುತ್ಪಾದಕ ಸಾಲ(ಎನ್ಪಿಎ) ಇಲ್ಲಿಯ ವರೆಗೆ 19,35,183=08 ರೂಗಳ ಸಾಲವಿದ್ದು ಬೃಹತ್ ಸಿಂಡ್ ಅದಾಲತ್ (ರಿಕವರಿ ಕ್ಯಾಂಪ್)ನಲ್ಲಿ ಒಂದೇ ಕಂತಿನ ರಿಯಾಯತಿಯಲ್ಲಿ ತುಂಬಲು ಅನುಕೂಲವಿದೆ ಎಂದು ಬ್ಯಾಂಕಿನವರು ರೈತನಿಗೆ ನೋಟಿಸ್ ನೀಡಿದ್ದರು.
ಬ್ಯಾಂಕಿನಲ್ಲಿ 4.90 ಲಕ್ಷ ರೂಗಳ ಟ್ಯಾಕ್ಟರ್ ಮೇಲೆ ಸಾಲವನ್ನು ಪಡೆದಿದ್ದೆ, ಬ್ಯಾಂಕಿನವರು ಟ್ಯಾಕ್ಟರ್ ಜೊತೆಗೆ ಟ್ರೇಲರನ್ನು ಕೂಡಾ ಜಪ್ತಿ ಮಾಡಿ, ದಿ. 26-03-2008 ರಂದು ಬಹಿರಂಗ ಹರಾಜಿನಲ್ಲಿ ಟ್ಯಾಕ್ಟರ್ ಮತ್ತು ಟ್ರೇಲರ್ನ್ನು ಮಾರಾಟ ಮಾಡಿ ಸಾಲವನ್ನು ತುಂಬಿಕೊಂಡು ಉಳಿದ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಿದ್ದರು. ಈಗ ದೀಢಿರಣೆ ನನ್ನ ಹೆಸರಿನಲ್ಲಿ ಸಾಲವಿದೆ ಎಂದು ನೋಟಿಸು ನೀಡಿದ್ದಾರೆ ಈಗ ನನಗೆ ಏನು ಮಾಡಬೇಕೆಂದು ತಿಳಿಯದಾಗಿದೆ ಎಂದು ರೈತ ಮಹೇಶ ಹೊರಟ್ಟಿಯ ಅಳಲಾಗಿದೆ.
ಇದು 2008ರ ಪ್ರಕರಣವಾಗಿದ್ದು ಇದರ ಬಗ್ಗೆ ಪರಿಶೀಲನೆ ಮಾಡಲು ನಮಗೆ ಸಮಯಬೇಕಾಗುತ್ತದೆ. ಇದರ ಬಗ್ಗೆ 3-4ದಿನಗಳಲ್ಲಿ ಸೂಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಬ್ಯಾಂಕಿನ ಶಾಖಾಧಿಕಾರಿಯ ಹೇಳಿಕೆಯಾಗಿದೆ.