ಗೋಕಾಕ:ಪ್ರೇಯಸಿಯನ್ನು ಕಿಡ್ನಾಪ ಮಾಡಲು ಯತ್ನ ಪ್ರೀಯತಮ ಸೇರಿ ನಾಲ್ವರಿಗೆ ಗೂಸಾ : ಗೋಕಾಕ ತಾಲೂಕಿನ ಅರಳಿಮಟ್ಟಿ ಬಳಿ ಘಟನೆ
ಪ್ರೇಯಸಿಯನ್ನು ಕಿಡ್ನಾಪ ಮಾಡಲು ಯತ್ನ ಪ್ರೀಯತಮ ಸೇರಿ ನಾಲ್ವರಿಗೆ ಗೂಸಾ : ಗೋಕಾಕ ತಾಲೂಕಿನ ಅರಳಿಮಟ್ಟಿ ಬಳಿ ಘಟನೆ
ಗೋಕಾಕ ಅ 3: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಅಪಹರಿಸಲು ಬಂದಿದ್ದ ಪ್ರೀಯತಮ ಸೇರಿದಂತೆ ನಾಲ್ವರನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಧಳಿಸಿರುವ ಘಟನೆ ಗೋಕಾಕ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ನಡೆದಿದೆ
ರಾಯಚೂರಿನ ಮಹೇಶ್ ಮತ್ತು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳಬೇಕೆಂದು ಮನೆಯವರ ಮುಂದೆ ತಮ್ಮ ಪ್ರೇಮ ನಿವೇದನೆ ತೋಡಿಕೊಂಡಿದ್ದರು. ಆದರೆ, ಇದಕ್ಕೊಪ್ಪದ ಯುವತಿ ಮನೆಯವರು ಆಕೆಯನ್ನು ತಾಯಿ ತವರು ಮನೆಯಾದ ಗೋಕಾಕ್ ತಾಲೂಕಿನ ಗುಲಗಂಜಿಕೊಪ್ಪದಲ್ಲಿ ಇರಿಸಿದ್ದರು.
ವಿಷಯ ತಿಳಿದ ಪ್ರಿಯತಮ ಮಹೇಶ್ ತನ್ನ ಸ್ನೇಹಿತರಾದ ಅರುಣ, ರಮೇಶ್ ಮತ್ತು ವಿಜಯ ಎನ್ನುವವರ ಸಹಾಯ ಪಡೆದು ಗುಲಗಂಜಿಕೊಪ್ಪಕ್ಕೆ ಆಗಮಿಸಿ ಯುವತಿಯ ಅಪಹರಣಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಇದಕ್ಕೆ ಯುವತಿಯ ಮನೆಯರು ವಿರೋಧ ವ್ಯಕ್ತಪಡಿಸಿದ್ದರು. ಪಟ್ಟು ಬಿಡದ ಯುವಕರು ವಾಗ್ವಾದಕ್ಕಿಳಿದಿದ್ದರು. ಇದರಿಂದ ರೋಸಿ ಹೋದ ಗ್ರಾಮಸ್ಥರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಯುವಕರು ಥಳಿತದಿಂದ ತಪ್ಪಿಸಿಕೊಂಡು ಕಾರು ಏರಿ ಪರಾರಿಯಾಗಲು ಯತ್ನಿಸಿದ್ದರು. ಸಿನಿಮಿಯ ರೀತಿಯಲ್ಲಿ ಕಾರು ಬೆನ್ನಟ್ಟಿದ್ದ ಗ್ರಾಮಸ್ಥರನ್ನು ಕಂಡ ಯುವಕರು ಪರಾರಿಯಾಗುವ ತವಕದಲ್ಲಿ ವೇಗವಾಗಿ ಚಲಿಸುತ್ತಿದ್ದರಿಂದ ಅರಳಿಮಟ್ಟಿ ಗ್ರಾಮದ ಬಳಿ ಕಾರು ಪಲ್ಟಿಯಾಗಿದೆ. ಇವರನ್ನು ಹಿಂಬಾಲಿಸಿ ಬಂದ ಗ್ರಾಮಸ್ಥರು ಮೂವರನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗಾಯಾಳುಗಳನ್ನು ಗೋಕಾಕ್ ಮತ್ತು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ್ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ