ಗೋಕಾಕ:ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ಅಂಬಿರಾವ್ ಪಾಟೀಲ
ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ಅಂಬಿರಾವ್ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 23 :
ಕ್ರೈಸ್ತ ಧರ್ಮವು ಜಗತ್ತಿನಾದ್ಯಂತ ಪಸರಿಸಿದ್ದು, ನಿಮ್ಮ ನೆರೆ-ಹೊರೆಯವರನ್ನು ಪ್ರೀತಿಸಿ ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಹೇಳಿದರು.
ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಸೋಮವಾರದಂದು ತಾಲೂಕಾ ಕ್ರೈಸ್ತ ಸಮುದಾಯ ಟ್ರಸ್ಟ್ ಏರ್ಪಡಿಸಿದ್ದ ಕ್ರಿಸಮಸ್ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪ್ರಪಂಚವು ಸುಂದರವಾಗಿ ಕಂಡಾಗ ಮಾತ್ರ ಪ್ರತಿ ಮನುಕುಲವು ದೈವ ಸ್ವರೂಪಿಯಾಗುತ್ತದೆ ಎಂದು ಹೇಳಿದರು.
ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ.ಏಸು ಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ವ್ಯವಸ್ಥಿತ ರೂಪುರೇಷೆ ಕ್ರೈಸ್ತ ತತ್ವಗಳ ಬಗ್ಗೆ ಬದ್ಧತೆ ಮುಂತಾದ ಕಾರಣಗಳಿಂದ ಪ್ರಪಂಚವು ಜಾತಿ-ಮತ-ಪಂಥಗಳ ಬೇಧವಿಲ್ಲದೆ ಆಚರಿಸುವ ಕ್ರಿಸಮಸ್ ಹಬ್ಬವಾಗಿದೆ. ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶವು ಪ್ರತಿ ದಿನವು ಹಬ್ಬವಾಗಿ ಮಾರ್ಪಡಾಗಲಿ ಎಂದು ಹಾರೈಸಿದರು.
ಕ್ರಿಸಮಸ್ ಹಬ್ಬದ ಪ್ರಯುಕ್ತ ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ ಅವರು ಕೇಕ್ ಕತ್ತರಿಸಿ ಸಮಾಜ ಬಾಂಧವರಿಗೆ ಶುಭ ಕೋರಿದರು.
ಟ್ರಸ್ಟ್ ಗೌರವಾಧ್ಯಕ್ಷ ಏಬಿನೇಜರ್ ಕರಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರಾದ ರಮೇಶ ಜಾರಕಿಹೊಳಿ,ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಸಹೋದರರಿಗೆ ಇನ್ನೂ ಉನ್ನತ ಮಟ್ಟದ ಅಧಿಕಾರ ಹಾಗೂ ಆಯುರಾರೋಗ್ಯ ಭಾಗ್ಯ ಕರುಣಿಸಲಿ.ನಾಡು ಸಮೃದ್ಧವಾಗಲಿ. ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲಿ ಎಂದು ಏಸುವಿನಲ್ಲಿ ಪ್ರಾರ್ಥಿಸಿದರು.
ಜಿ.ಪಂ ಸದಸ್ಯರಾದ ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ, ಮುಖಂಡರಾದ ಅಶೋಕ ಖಂಡ್ರಟ್ಟಿ, ಸುಧೀರ ಜೋಡಟ್ಟಿ, ಯುವ ಮುಖಂಡ ನಾಗಪ್ಪ ಶೇಖರಗೋಳ, ಶಿವಪ್ಪ ದೊಡ್ಡಕೆಂಚನವರ, ಟಿಎಪಿಸಿಎಂಎಸ್ ನಿರ್ದೇಶಕ ಕೆಂಚಪ್ಪ ಮಂಟೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.