ಖಾನಾಪುರ:ವಿಜೃಂಭನೆಯಿಂದ ನಡೆಯುತ್ತಿರುವ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆ
ವಿಜೃಂಭನೆಯಿಂದ ನಡೆಯುತ್ತಿರುವ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆ
ನಮ್ಮ ಬೆಳಗಾವಿ ಇ – ವಾರ್ತೆ , ಖಾನಾಪುರ ಅ 10 :
ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆ 7 ರಿಂದ ಪ್ರಾರಂಭಗೊಂಡಿದ್ದು, ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ದಿನನಿತ್ಯ ನಡೆಯುತ್ತಿದೆ. ಜತೆಗೆ ಅವಳ ಸಹೋದರಿ ಮುಕ್ಕಮ್ಮದೇವಿ ಮಂದಿರದಲ್ಲಿಯೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಮುಕ್ಕಮ್ಮ ದೇವಿಗೆ ವಿಶೇಷ ಪಾದುಕಟ್ಟೆಯ ಮೇಲೆ ಉಪ್ಪು ಹಾಕಿ ಮಂದಿರಕ್ಕೆ ಹೋಗಿ ದರ್ಶನ ಪಡೆದರು. ಮಕ್ಕಳು ಕಿರಿಕಿರಿ ಮಾಡುತ್ತಿದ್ದರೆ, ದನಕರುಗಳಿಗೆ ರೋಗರುಜಿನ ಬರದಂತೆ, ಚರ್ಮರೋಗ ಇದ್ದವರು ದೇವಿಗೆ ಉಪ್ಪು ಹಾಕುವುದಾಗಿ ಹರಕೆ ಬೇಡಿಕೊಳ್ಳುತ್ತಾರೆ. ಅದರಂತೆ ಜಾತ್ರೆ ಸಂದರ್ಭದಲ್ಲಿ ಪಾದುಕಟ್ಟೆಯ ಮೇಲೆ ಉಪ್ಪು ಹಾಕಿ ಹರಕೆ ತೀರಿಸುತ್ತಾರೆ. ಬಿಷ್ಟಾದೇವಿ ಹಾಗೂ ಸಹೋದರಿ ಮುಕ್ಕಮ್ಮ ಎರಡೂ ಮಂದಿರಗಳಲ್ಲಿ ಸದ್ಯ ಕೇವಲ ಉಡಿ ತುಂಬುವ ಕಾರ್ಯಕ್ರಮ ಮಾತ್ರವಿದ್ದು, ತೆಂಗಿನಕಾಯಿ ಒಡೆಯುವುದಿಲ್ಲ. ಈ ಎರಡೂ ಮಂದಿರಗಳಲ್ಲಿ ಭಾವಚಿತ್ರ ಇರುವುದಿಲ್ಲ. ಫೋಟೋ ತೆಗೆಯಲು ಪ್ರಯತ್ನಿಸಿದರೂ ಅದು ಮೂಡುವುದಿಲ್ಲ. ಅದನ್ನು ಮೀರಿ ತೆಗೆದರೆ ತೊಂದರೆ ಅನುಭವಿಸುತ್ತಾರೆ ಎಂಬ ನಂಬಿಕೆ ಇದೆ.
ಕೇವಲ ದಸರಾ, ದೀಪಾವಾಳಿ, ಯುಗಾದಿ ಪಾಡ್ಯದಂದು ಬೆಳಗ್ಗೆ 4 ರಿಂದ 6 ರವರೆಗೆ ತೆಂಗಿನಕಾಯಿ ಒಡೆಯುವ ಪದ್ಧತಿ ಈ ಗ್ರಾಮದಲ್ಲಿದೆ. ಗ್ರಾಮದ ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ ಬಾಂದವವರು ಜಾತಿ ಬೇದವಿಲ್ಲದೆ ಕೂಡಿಕೊಂಡು ಪ್ರತಿವರ್ಷ ಅತಿ ವಿಜೃಂಭನೆಯಿಂದ ಜಾತ್ರೆ ಆಚರಿಸುತ್ತಾ ಬಂದಿದ್ದಾರೆ.
ಮುಕ್ಕಮ್ಮ ದೇವಿಯ ಪಾದುಕಟ್ಟೆಯ ಮೇಲೆ ಭಕ್ತರು ಹಾಕಿರುವ ಉಪ್ಪು ಸುಮಾರು ಕಿಂಟಲ್ಗಟ್ಟಲೆ ರಾಶಿ ಬಿದ್ದಿದೆ. ಈ ಉಪ್ಪನ್ನು ರೈತರು, ಗ್ರಾಮಸ್ಥರು ತೆಂಗಿನ ಗಿಡಗಳಿಗೆ, ಮಂದಿರದಲ್ಲಿದ್ದ ಗಿಡಗಳಿಗೆ ಹಾಕಲು ಉಪಯೋಗಿಸುತ್ತಾರೆ. ಈ ಉಪ್ಪು ಹಾಕಿದ್ದರಿಂದ ಮರಗಳು ಉತ್ತಮ ಫಸಲು ನೀಡುತ್ತವೆ ಎಂಬುದು ಭಕ್ತರ ಅಭಿಪ್ರಾಯ.
ಜಾತ್ರೆಯ ನಿಮಿತ್ಯ ಗ್ರಾಮದಲ್ಲಿರುವ ಸರ್ಕಾರಿ ಸರಾಯಿ (ಎಮ್.ಎಸ್.ಐ.ಎಲ್) ಅಂಗಡಿಯನ್ನು ಅ 7 ರಿಂದ 9 ಸಾಯಂಕಾಲದ ವರೆಗೆ ಸರಾಯಿ ಮಾರದಂತೆ ಜಿಲ್ಲಾಡಳಿತ ಆದೇಶದ ಮೇರೆಗೆ ನಂದಗಡ ಠಾಣೆಯವರು ಸರಾಯಿ ಮಾರಾಟ ಅಂಗಡಿಗೆ ಬಿಗ ಹಾಕಿ ಸಿಲ ಮಾಡಲಾಗಿತು. ಇದರಿಂದ ಕುಡುಕರ ಹಾವಳಿ ತಡೆಗಟ್ಟಲು ಪೊಲೀಸರಿಗೆ ಹೆಚ್ಚಿನ ಅನುಕುಲವಾಗಿದೆ. ಭಕ್ತರು ಸುಗಮವಾಗಿ ಮಂದಿರದ ದರ್ಶನ ಪಡೆದುಕೊಂಡರು. ಕುಡುಕರಿಗೆ ಸರಾಯಿ ಸಿಗದೆ ಪರದಾಡುವಂತಾಯಿತು. ಆದರು ಸಮೀಪದ ಪಟ್ಟಣಗಳಿಂದ ಸರಾಯಿ ತಂದು ಕೆಲವರು ಕುಡಿದಿದ್ದು ಕಂಡುಬಂದಿದೆ.