ಗೋಕಾಕ:ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಬ್ ಡಿಸ್ಟ್ರಿಕ್ಟ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸಬೇಕು

ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಬ್ ಡಿಸ್ಟ್ರಿಕ್ಟ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸಬೇಕು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 21 :
ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಬ್ ಡಿಸ್ಟ್ರಿಕ್ಟ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈವರೆಗೆ ಗೋಕಾಕ ಜಿಲ್ಲೆ ಘೋಷಣೆಯಾಗದೆ ಇರುವದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಸನ್ 1891ರಲ್ಲಿಯೇ ಗೋಕಾಕ ಮಿಲ್ಲಿಗೆ ಜಮೀನು ಲೀಜ್ ನೀಡಿದ ಸಮಯದಲ್ಲಿ ಅದು ಗೆಜೆಟ್ದಲ್ಲಿ ಪ್ರಕಟಗೊಂಡಿದ್ದು ಅದರಲ್ಲಿ ಗೋಕಾಕ ಸಬ್ ಡಿಸ್ಟ್ರಿಕ್ಟ ಎಂದು ಉಲ್ಲೇಖಿಸಲಾಗಿದ್ದು ಕಾರಣಾಂತರದಿಂದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಗೋಕಾಕ ಜಿಲ್ಲೆಯಾಗಲು ಸಾಧ್ಯವಾಗಿಲ್ಲ. ಕಳೆದ 40 ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಹೋರಾಟ, ಚಳವಳಿ ಈ ಭಾಗದ ಜನತೆ ನಡೆಸಿದರೂ ಉಪಯೋಗವೇನೂ ಆಗಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಈಗ ವಿಜಯನಗರ ಜಿಲ್ಲೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊರಟಿರುವದು ನೋಡಿದರೆ ಈ ಭಾಗದ ಜನಸಾಮಾನ್ಯರ ಬೇಡಿಕೆಗೆ ಯಾವ ಬೆಲೆಯೂ ಇಲ್ಲದಂತಾಗಿದೆ ಎಂದು ತಿಳಿಸಿದರು. ಜಿಲ್ಲಾ ವಿಭಜನೆಗಾಗಿ ರಚಿಸಿದ ಎಲ್ಲ ಆಯೋಗಗಳು ಗೋಕಾಕ ಜಿಲ್ಲೆ ಮಾಡಲು ಶಿಫಾರಸು ಮಾಡಿದ್ದರೂ ರಾಜ್ಯ ಸರಕಾರ ಗೋಕಾಕ ಜಿಲ್ಲೆ ಮಾಡಲು ಮೀನಿಮೇಷ ಮಾಡುತ್ತಿರುವದು ದುಃಖದ ಸಂಗತಿ ಎಂದು ಹೇಳಿದರು.
ಈ ಬಗ್ಗೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಈ ಬಗ್ಗೆ ಚಳವಳಿ, ಬಂದ್ ಇತ್ಯಾದಿ ಹೋರಾಟದ ಮೂಲಕ ಯತ್ನಿಸಲಾಗುವದು. ಇದು ಪಕ್ಷಾತೀತವಾಗಿ ನಡೆಯಲಿದ್ದು ಹೋರಾಟದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಮನವೊಲಿಸಲಾಗುವದು ಎಂದು ತಿಳಿಸಿದ ಅಶೋಕ ಪೂಜಾರಿ ತಾಲೂಕಿನ ಜನತೆ ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ ಅವರು ಮಾತನಾಡಿ ಈವರೆಗೆ ಜಿಲ್ಲಾ ಹೋರಾಟದಲ್ಲಿ ನ್ಯಾಯವಾದಿಗಳ ಸಂಘ ಮುಂಚೂಣಿಯಲ್ಲಿ ಇದ್ದು ಇನ್ನುಮುಂದೆ ಕೂಡಾ ಇರುತ್ತದೆ. ಅದಕ್ಕಾಗಿ ದಿ. 23ರಂದು ನ್ಯಾಯವಾದಿಗಳ ಸಂಘದ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಹೋರಾಟದ ರೂಪುರೇಷೆ ತಯಾರಿಸಲಾಗುವದು ಎಂದು ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಪ್ರಕಾಶ ಭಾಗೋಜಿ, ದಸ್ತಗೀರ ಪೈಲವಾನ, ಸುನೀಲ ಮುರಕೀಭಾಂವಿ, ನ್ಯಾಯವಾದಿಗಳಾದ ಎಸ್.ಎಸ್.ಪಾಟೀಲ ಜಿ.ಆರ್.ಪೂಜೇರ, ಗಿರೀಶ ನಂದಿ, ಜಿಲ್ಲಾ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.