ಬೆಳಗಾವಿ:ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ
ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ
ಬೆಳಗಾವಿ ಜು 13: ಡಿಐಜಿ ರೂಪಾ ಅವರು ಬರೆದಿರುವ ವರದಿಯನ್ನು ಖಂಡಿಸಿ ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ
ಡಿಐಜಿ ರೂಪ ತಮ್ಮ ಹಿರಿಯ ಅಧಿಕಾರಿಗೆ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಪತ್ರ ಬರೆದ ಹಿನ್ನಲೆ, ಜೈಲು ಅಧೀಕ್ಷಕ ಟಿ.ಪಿ. ಶೇಷ ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಜೈಲಿನ ಮುಂಭಾಗ ಕುಳಿತು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.
ಕಾರಾಗೃಹ ಡಿಜಿ ಸತ್ಯನಾರಾಯಣ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ. ಆದ್ರೆ ಅವರು ಧನಾತ್ಮಕವಾದ ಕಾರ್ಯಗಳನ್ನು ಮಾಡಿದ್ದು, ಕೈದಿಗಳ ಮನಪರಿವರ್ತನೆ ವಿಚಾರ ಹಾಗೂ ಸಿಬ್ಬಂದಿಗಳ ಸುಧಾರಣೆ ವಿಚಾರವಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸತ್ಯನಾರಾಯಣ ಅವರು ಕಾರಾಗೃಹ ಇಲಾಖೆ ಸಮಗ್ರ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಹಿಂಡಲಗಾ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಹೇಳಿಕೆ ನೀಡಿದ್ದಾರೆ.
ಡಿಜಿ ಸತ್ಯನಾರಾಯಣ ಅವರು ಆರೋಪ ಮುಕ್ತವಾಗುವಾವರೆಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ರಾಜ್ಯಪಾಲರಿಗೆ ನಾವು ಮನವಿ ಸಲ್ಲಿಸುತ್ತೇವೆಂದು ಟಿ.ಪಿ. ಶೇಷ ತಿಳಿಸಿದ್ದಾರೆ