ಗೋಕಾಕ:ಹಡಪದ ಅಪ್ಪಣ್ಣ ಯುವಕ ಸಂಘದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಹಡಪದ ಅಪ್ಪಣ್ಣ ಯುವಕ ಸಂಘದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಬೆಟಗೇರಿ ಜು 27 : 12ನೇಯ ಶತಮಾನದ ಬಸವಾದಿ ಪ್ರಮಥರ ಜೋತೆಯಲ್ಲಿದ್ದ ಶಿವಶರಣ ಹಡಪದ ಅಪ್ಪಣ್ಣನವರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತದಿಂದ ಇನ್ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಹೇಳಿದರು.
ಗ್ರಾಮದ ಅಶ್ವಾರೂಢ ಬಸವೇಶ್ವರರ ವೃತ್ತದಲ್ಲಿ ಸ್ಥಳೀಯ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘದ ಸಹಯೋಗದಲ್ಲಿ ಶುಕ್ರವಾರ ಜುಲೈ.27 ರಂದು ಆಯೋಜಿಸಿದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಪ್ಪಣ್ಣನವರು ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಸಹ ವಿಶ್ವಗುರು ಬಸವಣ್ಣನವರಿಗೆ ಅತ್ಯಂತ ಹತ್ತಿರದವರಾಗಿದ್ದರು ಎಂದರು.
ನುಡಿಯಂತೆ ನಡೆ, ವಿಚಾರದಂತೆ ಆಚಾರ ಇವುಗಳಿಂದ ಕೂಡಿದ ನಿಷ್ಠೆಯ ಕೆಚ್ಚಿನಿಂದ ಮೂಡಿಬಂದಿರುವ ಇವರ ವಚನಗಳು ಷಟ್ ಸ್ಥಲ್ ತತ್ವ ನಿರೂಪಣೆಗೆ ಮೀಸಲಾಗಿವೆ. ಅಪ್ಪಣ್ಣನವರ ಬದುಕಿನ ತತ್ವದಾರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರವಚನಕಾರ ಪಾರ್ವತೇರ ಅಭಿಪ್ರಾಯ ವ್ಯಕ್ತಪಡಿಸಿದರು.
ಹನ್ನೇರಡನೇಯ ಶತಮಾನದ ಬಸವಾದಿ ಪ್ರಮಥರ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು. ಈ ಮಹಾನ್ ಶಿವಶರಣನ ಜಯಂತಿಯನ್ನು ಪ್ರತಿ ವರ್ಷ ಜುಲೈ.27 ರಂದು ಅರ್ಥಪೂರ್ಣವಾಗಿ ಕನ್ನಡ ನಾಡಿನಾಧ್ಯಾಂತ ಶಾಲೆ, ಕಾಲೇಜು ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಆಚರಿಸುವಂತೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಅಭಿನಂದಾರ್ಹ ಸಂಗತಿಯಾಗಿದೆ ಎಂದು ಗ್ರಾಮದ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘದ ಕಾರ್ಯದರ್ಶಿ ಬಸವರಾಜ ಹನುಮಂತ ನಾವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಯ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘದ ಕಾರ್ಯದರ್ಶಿ ಬಸವರಾಜ ಹನುಮಂತ ನಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಯ್ಯ ಹಿರೇಮಠ, ಶಂಭು ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಿವಶರಣ ಅಪ್ಪಣ್ಣನವರ ಭಾವಚಿತ್ರಕ್ಕೆ ಸುಮಂಗಲೆಯರಿಂದ ಆರತಿ, ಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ನಡೆದ ನಂತರ ಸಿಹಿ ವಿತರಿಸಲಾಯಿತು.
ಶ್ರೀಧರ ದೇಯಣ್ಣವರ, ವೀರನಾಯ್ಕ ನಾಯ್ಕರ, ಬಸವರಾಜ ಪಣದಿ, ಈರಣ್ಣ ಬೆಟಗೇರಿ, ಸತ್ತೆಪ್ಪ ಬೆಟಗೇರಿ, ಹನುಮಂತ ನಾವಿ, ಬದ್ರು ನಾವಿ, ಚಂದ್ರಪ್ಪ ಕಂಬಿ, ಕಲ್ಲಪ್ಪ ಹುಬ್ಬಳ್ಳಿ, ಈಶ್ವರ ಮುಧೋಳ, ಈರಪ್ಪ ಮುಧೋಳ, ಬಸು ನಾವಿ, ಈರವ್ವ ಬೆಟಗೇರಿ, ಸುಮಿತ್ರಾ ನಾವಿ, ಈರವ್ವ ನಾವಿ, ಸ್ಥಳೀಯ ಎಲ್ಲ ಸಮುದಾಯದ ಹಿರಿಯರು, ಇಲ್ಲಿಯ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು, ಸಂತ-ಶರಣರು, ಸ್ಥಳೀಯರು, ಇತರರು ಇದ್ದರು.