ಗೋಕಾಕ:ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡರೂ ಪ್ರತಿ ಟನ್ ಕಬ್ಬಿಗೆ 3000 ರೂ. ಬಿಲ್ ಮುಂದುವರಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡರೂ
ಪ್ರತಿ ಟನ್ ಕಬ್ಬಿಗೆ 3000 ರೂ. ಬಿಲ್ ಮುಂದುವರಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಡಿ 25 : ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 3 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಸಕ್ತ ಹಂಗಾಮು ಕಳೆದ ಸೆ.6 ರಂದು ಪ್ರಾರಂಭಗೊಂಡಿದ್ದು, ಡಿ.23 ರವರೆಗೆ 2,11,164 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 2,15,040 ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಕಾರ್ಖಾನೆ ಪ್ರಾರಂಭದ ದಿನದಿಂದ ಸೆ. 30 ರವರೆಗೆ 54444 ಮೆಟಿಕ್ ಟನ್ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ.ಗಳನ್ನು ಸಂದಾಯ ಮಾಡಲಾಗಿದೆ. ಅಕ್ಟೋಬರ್ 1 ರಿಂದ ಡಿ.20 ರವರೆಗೆ 156720 ಮೆಟ್ರಿಕ್ ಟನ್ ಕಬ್ಬು ಕಳುಹಿಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 3000 ರೂ.ಗಳಂತೆ ಬಿಲ್ನ್ನು ರೈತರ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಇಳಿಮುಖ ಕಂಡಿದ್ದರೂ ಸಹ ರೈತರಿಗೆ ಕೊಟ್ಟ ಮಾತಿನಂತೆ ಇನ್ನೂ ಮುಂದೆ ಕಳುಹಿಸುವ ರೈತರಿಗೂ ಸಹ ಪ್ರತಿಟನ್ ಕಬ್ಬಿಗೆ ರೂ. 3000 ಗಳನ್ನು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಕಾರ್ಖಾನೆಯ ಲಾಭಕ್ಕಿಂತ ನಮಗೆ ರೈತ ಸಮೂಹದ ಹಿತವೇ ಮುಖ್ಯವಾಗಿದೆ. ರೈತರ ಜೀವನಾಡಿ ಆಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ-ಬೆಳೆಸಲು ರೈತ ಬಾಂಧವರು ಇನ್ನು ಮುಂದೆ ಪಕ್ವ ಹಾಗೂ ಸ್ವಚ್ಛವಾದ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯ ಸರ್ವತೋಮುಖ ಏಳ್ಗೆಗೆ ಕೈಜೋಡಿಸಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.