RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ

ಗೋಕಾಕ:ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ 

ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ


ಗೋಕಾಕ ಜೂ 26 : ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ ಎಂದು ಕರವೇ ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಮಂಗಳವಾರದಂದು ಮುಂಬೈ ಮಹಾನಗರದಲ್ಲಿ ಗೋಕಾಕಕಿನ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 52 ಹುಟ್ಟು ಹಬ್ಬದ ನಿಮಿತ್ತ ಕರವೇ ಗೋಕಾಕ ತಾಲೂಕು ಘಟಕ ಮುಂಬೈ ಕನ್ನಡ ಮಾಧ್ಯಮ ಎಸ್ ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಪಠ್ಯ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಈ ಕುರಿತು ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದು ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಶಿಂಧೆ ಸರಕಾರ ಗಡಿಭಾಗದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನೇ ನೇಮಿಸಬೇಕು ಎಂದ ಅವರು ಕಳೆದ ಹಲವು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಹೊರನಾಡಿನ ಕನ್ನಡಿಗರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದು, ಈ ವರ್ಷದಿಂದ ಮುಂಬೈ ಮಹಾನಗರದಲ್ಲಿರುವ ಪ್ರತಿಯೊಂದು ಶಾಲೆಗಳಿಗೆ ಭೇಟಿ ನೀಡಿ ಆ ಶಾಲೆಗಳಿಗೆ ನಮ್ಮ ಕೈಲಿಂದ ಆಗುವ ಸಹಾಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಂಬೈ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಅಮೃತಾ ಶೆಟ್ಟಿ ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆಯನ್ನು ಉಳಿಸುತ್ತಿರುವ ಮುಂಬೈ ಕನ್ನಡಿಗರಿಗೆ ಕರ್ನಾಟಕ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು
ಕನ್ನಡ ಭವನ ಸೊಸೈಟಿ ಕಳೆದ 60 ವರ್ಷಗಳಿಂದ ಮುಂಬೈ ಮಹಾನಗರದಲ್ಲಿ ಕನ್ನಡ ಶಾಲೆಯನ್ನು ಪ್ರಾರಂಭಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ಧಿಕ್ಷೆಯನ್ನು ನೀಡುವ ಕಾರ್ಯ ಮಾಡುತ್ತಾ ಬಂದಿದೆ. ಇಂದು ಮುಂಬೈ ಕನ್ನಡಿಗರ ಕನ್ನಡ ಪ್ರೇಮವನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆಯವರು ಕನ್ನಡ ಮಾಧ್ಯಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸತ್ಕರಿಸಿ ಅವರಿಗೆ ಪಠ್ಯ ಪುಸ್ತಕಗಳನ್ನು ವಿತರಿಸುವ ಕಾರ್ಯಮಾಡಿದ್ದು ನಿಜವಾಗಿಯೂ ಶ್ಲಾಘನೀಯ. ಕರ್ನಾಟಕದ ಈ ಸಹಕಾರ ಮುಂಬೈನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಇರಲಿ ಎಂದು ಆಶಿಸಿದರು.

ಕಾರ್ಯದರ್ಶಿ ಸಾದಿಕ ಹಲ್ಯಾಳ ಮಾತನಾಡಿ ಹೊರನಾಡಿನಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯಬೇಕೆಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಕನ್ನಡಿಗರು ಪರಸ್ಪರ ‌ಸಹಕಾರದೊಂದಿಗೆ ಕಾರ್ಯಮಾಡಬೇಕು ಆ ನಿಟ್ಟಿನಲ್ಲಿ ಹೊರನಾಡಿನ ಕನ್ನಡಿಗರನ್ನು ಬೆಸೆಯುವ ಕಾರ್ಯವನ್ನು ಕರವೇ ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದು, ಮುಂದೆಯು ಹಲವು ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕನ್ನಡಿಗರಿಗೆ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್.ಎಲ್. ಸಿ ಪರೀಕ್ಷೆಯಲ್ಲಿ ಫ್ರಥಮ ಸ್ಥಾನ ಪಡೆದ ನರಸಿಂಗಮ್ಮಾ ಪೂಜಾರಿ, ದ್ವಿತೀಯ ಸ್ಥಾನ ಪಡೆದ ಅನ್ನಪೂರ್ಣ ಬೋಲೆರ,ಹಾಗೂ ತೃತೀಯ ಸ್ಥಾನ ಪಡೆದ ಆರತಿ ಚೌವಾನ ಅವರನ್ನು ಕರವೇ ವತಿಯಿಂದ ಸತ್ಕರಿಸಿ, ಪಾರಿತೋಷಕವನ್ನು ನೀಡಿ ಗೌರವಿಸಿ ,100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟಬುಕ್ಕ, ಪೆನ್ ಕಂಪಾಸ್ ಬಾಕ್ಸಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಿ.ಬಿ‌ , ಅಮಿನ, ಕಾರ್ಯದರ್ಶಿ
ಅಮಿನ ಶೇಖರ, ಪ್ರಕಾಶ್ ಮೂಡಬೀದರಿ, ಸಮಾಜ ಸೇವಕ ಸಂತೋಷ ನಾಯ್ಕರ, ಶಿವಾನಂದ ಪಾಟೀಲ, ನಾಗರತ್ನ ದೇವಾಡಿ, ಚಿತ್ರಲೇಖಾ ಮಾಲಿ, ವಿಠಲ ಮಣ್ಣೂರೆ, ಪುಂಡಲೀಕ ತಳ್ಳಿ, ಕರವೇಯ ಮಹಾದೇವ ಮಕ್ಕಳಗೇರಿ,ಮುಗುಟ ಪೈಲವಾನ,ಸಂಜೀವ ಗೋಟೂರ,,ಮೋಸಿನ ಮಂಕಾದರ ಉಪಸ್ಥಿತರಿದ್ದರು.

Related posts: