ಗೋಕಾಕ:ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಪರಮೇಶ್ವರ ಹೊಸಮನಿ ಆಗ್ರಹ
ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಪರಮೇಶ್ವರ ಹೊಸಮನಿ ಆಗ್ರಹ
ಗೋಕಾಕ ಸೆ 12: ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು, ಇಲ್ಲವಾದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಿಕೊಂಡು ಹೋಗಬೇಕೆಂದು ಕೌಜಲಗಿ ಜಿ.ಪಂ. ಮತಕ್ಷೇತ್ರದ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟನೆ ನೀಡಿ ಕೌಜಲಗಿ ತಾಲೂಕು ಕೇಂದ್ರವಾಗುವ ನಿಟ್ಟಿನಲ್ಲಿ ಕಳೆದ 5 ದಶಕಗಳಿಂದ ಕೌಜಲಗಿ ಭಾಗದ ಜನತೆ ಹೋರಾಟ ಮಾಡುತ್ತಿದ್ದಾರೆ. ನಿಯೋಜಿತ ಕೌಜಲಗಿ ತಾಲೂಕಿನಲ್ಲಿ ಸೇರ್ಪಡೆಯಾಗಲು ಪಕ್ಕದ ತಾಲೂಕಾಗಳಾದ ಮುಧೋಳ, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಕೆಲ ಗ್ರಾಮಗಳು ಒಪ್ಪಿಗೆಯನ್ನು ಸಹ ನೀಡಿದ್ದು ಗಮನಿಸಬೇಕಾದ ಅಂಶವಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕು ಪುನರ್ರಚನಾ ಸಮಿತಿಗಳಾದ ವಾಸುದೇವ ಹಾಗೂ ಹುಂಡೇಕಾರ ಆಯೋಗಗಳು ಕೌಜಲಗಿ ತಾಲೂಕುವಾಗಲು ಸೂಕ್ತವಾಗಿದೆ ಎಂದು ವರದಿಯನ್ನು ಕೂಡಾ ಸಲ್ಲಿಸಿವೆ. ಅಲ್ಲದೆ ಶೈಕ್ಷಣಿಕ, ಆಡಳಿತ್ಮಾಕವಾಗಿ ಹಾಗೂ ವಾಣಿಜ್ಯೋದ್ಯಮ ದೃಷ್ಟಿಯಲ್ಲಿ ನೋಡುವದಾದರೆ ಕೌಜಲಗಿ ಸೂಕ್ತ ಸ್ಥಳವಾಗಿದೆ. ಈ ಎಲ್ಲ ವಿಷಯಗಳನ್ನು ಗಮನಿಸಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೂಡಲೇ ಕೌಜಲಗಿಯನ್ನು ತಾಲೂಕಾ ಕೇಂದ್ರವಾಗಿ ಘೋಷಣೆ ಮಾಡಬೇಕು ಇಲ್ಲವೇ ಗೋಕಾಕ ತಾಲೂಕಿನಲ್ಲಿಯೇ ಕೌಜಲಗಿ ಹೋಬಳಿ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸಿದ್ದಾರೆ.