ಗೋಕಾಕ:ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ: ಗೋವಿಂದ ಕೊಪ್ಪದ
ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ: ಗೋವಿಂದ ಕೊಪ್ಪದ
ಗೋಕಾಕ ಡಿ 26 : ರೈತನ ಸ್ವಾವಲಂಬಿ ಬದುಕಿಗೆ ಆರ್ಥಿಕಾಭಿವೃದ್ಧಿ ವೃದ್ಧಿಸಲು ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿಕೊಳ್ಳುವಂತೆ ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಕೃಷಿ ಇಲಾಖೆಯಿಂದ ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಯೋಜನೆಯಡಿ 2017-18ನೇ ಸಾಲಿನಲ್ಲಿ ಆಯ್ಕೆಯಾದ ಲಕ್ಷ್ಮೇಶ್ವರ ಗ್ರಾಮದ ಗಂಗಾಧರ ನಿಂಗಪ್ಪ ತೊಗರಿ ಅವರಿಗೆ 5 ಲಕ್ಷ ರೂ.ಗಳ ಸಹಾಯಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಂತಹ ರೈತಸ್ನೇಹಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಯಾರ ಹಂಗಿಲ್ಲದೆ ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಬೇಕು. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಯೋಗ್ಯ ಬೆಲೆ ನೀಡಿದರೆ ಮಾತ್ರ ರೈತನ ಬದುಕು ಹಸನಾಗಲು ಸಾಧ್ಯವೆಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಎನ್ಎಸ್ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ಮೂಡಲಗಿಯ ಮಲೀಕ ಹುಣಶ್ಯಾಳ, ಕೌಜಲಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ, ಲಕ್ಕಪ್ಪ ಲೋಕುರಿ, ಪಾಂಡು ದಾಸರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರವು ಕುಲಗೋಡ ಗ್ರಾಮದಲ್ಲಿ ಆರಂಭಿಸಲಾಗಿದ್ದು, ರೂಟಾವೇಟರ್, ನೇಗಿಲು, ರವದಿ ಕತ್ತರಿಸುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಮೋಟಾರ ಮತ್ತು ಪಂಪ್, ಟ್ರ್ಯಾಕ್ಟರ್ ವೇಲ್ಡಿಂಗ್ ವರ್ಕ, ಮುಂತಾದವುಗಳನ್ನು ಈ ಕೇಂದ್ರದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಕುಲಗೋಡ ಹಾಗೂ ಸುತ್ತಮುತ್ತಲಿನ ರೈತರು ಈ ಸೇವಾ ಕೇಂದ್ರದ ಪ್ರಯೋಜನ ಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್ ಕೋರಿದರು.
