ಮೂಡಲಗಿ:ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ
ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ
ಮೂಡಲಗಿ ನ 30 : ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡದೆ, ಮಕ್ಕಳಿಗೆ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು. ಮಗುವಿನ ಕಲಿಕೆಯ ನಂತರ ಸಮಾಜ ಮುಖಿಯಾಗಿ ಬದುಕಿಗೆ ಬಂದಾಗ ಆದರ್ಶ ಗುಣಗಳನ್ನು ಈ ಸಮಾಜ ಅಪೇಕ್ಷಿಸಿರುತ್ತದೆ.ವಿದ್ಯಾರ್ಜನೆಗೆ ಮಾತ್ರ ಅವಕಾಶ ನೀಡದೆ ಸಮಾಜದ ಆಗುಹೋಗುಗಳ ಕುರಿತು ಅರಿವು ಮೂಡಿಸುವ ಕಾರ್ಯ ಶಿಕ್ಷಕರ ಮೇಲಿದೆ ಎಂದು ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ಹೇಳಿದರು.
ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರು ಕೇವಲ ಪಠ್ಯ ಪುಸ್ತಕ, ಅಂಕಗಳೆ ಮಾನ ದಂಡಗಳನ್ನಾಗಿ ಸ್ವೀಕರಿಸಬಾರದು. ವಿದ್ಯಾರ್ಥಿಗಳು ಎಲ್ಲದರಲ್ಲಿ ಎಲ್ಲರು ಜಾಣತನ ವಿರುವದಿಲ್ಲ. ಅವರವರ ಸಾಮಾಥ್ರ್ಯಕ್ಕೆ ತಕ್ಕಂತೆ ಅವರ ಅಭಿರುಚಿಗಳಾನುಸಾರ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಮೊದಲು ಮಕ್ಕಳ ಕಲಿಕಾ ಸಾಮಥ್ರ್ಯ ಗುರುತಿಸಿ ಅವರಿಗೆ ಮುಕ್ತ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾರ್ಯ ಮಾಡಬೇಕೆಂದರು.
ಶಿವಬೋಧರಂಗ ಸಿದ್ದ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಆಶಿರ್ವಚನ ನೀಡಿ, ಮಕ್ಕಳಿಗೆ ಪರೀಕ್ಷಾ ಭಯ ಹೋಗಲಾಡಿಸಬೇಕು. ಅವರ ದೈಹಿಕ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಾಲಕರು ಶಿಕ್ಷಕರು ಅಧಿಕಾರಿ ವರ್ಗದವರ ಪಾತ್ರ ಹಿರಿದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮೂಡಲಗಿ ಬಿ.ಇ.ಒ ಎ.ಸಿ ಮನ್ನಿಕೇರಿ ಮಾತನಾಡಿ, ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಸುಧಾರಣೆ ಕ್ರಮಗಳನ್ನು ಹಾಗೂ ಅನುಷ್ಠಾನಗೋಳಿಸುವ ಕುರಿತು ವಿವರಿಸಿದರು.
ಸಭೆಯಲ್ಲಿ ಪಿ.ಇ.ಒ ಎಸ್.ಎ ನಾಡಗೌಡರ, ಬಿ.ಆರ್.ಸಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಇ.ಸಿ.ಒ ಟಿ ಕರಿಬಸವರಾಜು, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಪಿ.ಜಿ ಪಾಟೀಲ, ಬಿ.ಎಮ್ ನಂದಿ, ಪ್ರೌಢ ಶಾಲಾ ಮುಖ್ಯೋಪಾಧ್ಯಯ ಸಂಘದ ಅಧ್ಯಕ್ಷ ಎಲ್ ಐ ಕೊಳವಿ, ಬಿಐಆರ್ಟಿಗಳಾದ ವಾಯ್.ಬಿ ಪಾಟೀಲ, ವಾಯ್ ಆರ್ ಮುಕ್ಕನ್ನವರ ಹಾಗೂ ಮೂಡಲಗಿ ವಲಯ ವ್ಯಾಪ್ತಿಯ ಪ್ರೌಢ ಶಾಲಾ ಸರಕಾರಿ ಅನುದಾನಿತ, ಅನುದಾನ ರಹಿತ ಮುಖ್ಯೋಪಾಧ್ಯಯರು ಉಪಸ್ಥಿತರಿದ್ದರು.