ಗೋಕಾಕ:ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ
ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ
ಬೆಟಗೇರಿ ಅ 6 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಪ್ರತಿ ಐದು ವರ್ಷಕ್ಕೂಮ್ಮೆ ಐದುದಿನಗಳ ಕಾಲ ಆ.6ರಿಂದ 10ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಮೊದಲ ದಿನವಾದ ಸೋಮವಾರ ಆಗಸ್ಟ್.6 ರಂದು ಬೆಳಗ್ಗೆ 8 ಗಂಟೆಗೆ ಶ್ರೀದೇವಿಯ ಗುಡಿಯ ಮುಂದೆ ಹಂದರ ಹಾಕುವುದು ಮತ್ತು ಊರಲ್ಲಿ ಅಂಕಿತ ಹಾಕುವ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಸಮೀಪದ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಿಂದ ಗ್ರಾಮದೇವತೆ ದ್ಯಾಮವ್ವದೇವಿಯ ಮೂರ್ತಿಯನ್ನು ಧಾರ್ಮಿಕ ಸಂಪ್ರದಾಯದ ವಿಧಿ ವಿಧಾನಗಳಂತೆ ಪೂಜೆ-ಪುನಸ್ಕಾರ ಸಲ್ಲಿಸಿ ಗ್ರಾಮದ ಸೀಮೆಗೆ ತರಲಾಯಿತು ಸಾಯಂಕಾಲ 4 ಗಂಟೆಗೆ ಊರಿನ ಸೀಮೆಯಿಂದ ಗ್ರಾಮದೇವಿ ಮೂರ್ತಿಯನ್ನು ಸ್ಥಳೀಯ ಅಡವಿಸಿದ್ಧೇಶ್ವರ ದೇಗುಲಕ್ಕೆ ಸುಮಮಗಲೆಯರ ಆರತಿ, ಸಕಲ ವಾಧ್ಯಮೇಳ, ಮೆರವಣಿಗೆಯೊಂದಿಗೆ ತಂದು ಕೂಡ್ರಿಸಲಾಯಿತು. ಯುವಕರು ಒಬ್ಬರಿಗೂಬ್ಬರು ಭಂಡಾರ ಎರಚಿ ಸಂಭ್ರಮಿಸಿದರು.ರಾತ್ರಿ 10ಗಂಟೆಗೆ ಗ್ರಾಮದೇವಿ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ನಾಟಕ ಪ್ರದರ್ಶನಗೊಂಡಿತು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ರಾಮಣ್ಣ ಬಳಿಗಾರ, ಶಿವಾಜಿ ನೀಲಣ್ಣವರ, ಲಕ್ಷ್ಮಣ ಸೋಮನಗೌಡರ, ವಿಠಲ ಕೋಣಿ, ಕಲ್ಲಪ್ಪ ಚಂದರಗಿ, ಸುರೇಶ ಬಡಿಗೇರ, ವೀರನಾಯ್ಕ ನಾಯ್ಕರ, ಗ್ರಾಮದೇವಿ ದೇವಾಲಯ ಅರ್ಚಕ ಬಾಳಪ್ಪ ಬಡಿಗೇರ,ಸೇರಿದಂತೆ ಸ್ಥಳೀಯ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಯುವಕರು, ಇಲ್ಲಿಯ ಹಾಗೂ ಸುತ್ತಲಿನ ಹಳ್ಳಿಗಳ ಭಕ್ತರು, ಗ್ರಾಮಸ್ಥರು, ಇತರರು ಇದ್ದರು.
ಇಂದು ಏನೇನು ಕಾರ್ಯಕ್ರಮ : ಜಾತ್ರಾ ಮಹೋತ್ಸವದ ಎರಡನೇಯ ದಿನವಾದ ಆ.7 ರಂದು ಮುಂಜಾನೆ 8ಗಂಟೆಗೆ ಪುರದೇವರ ಪಲ್ಲಕ್ಕಿ, ಸುಮಂಗಲೆಯರ ಆರತಿ, ಕುಂಭ ಮತ್ತು ವಾಧ್ಯಮೇಳಗಳೊಂದಿಗೆ ಸ್ಥಳೀಯ ಅಡವಿಸಿದ್ಧೇಶ್ವರ ದೇಗುಲದಿಂದ ಬಸ್ ನಿಲ್ದಾಣದ ಮೂಲಕ ಗ್ರಾಮದೇವತೆ ಮೂರ್ತಿಯನ್ನು ಗ್ರಾಮದ ಗೌಡರ ಕಟ್ಟೆಗೆ ತಂದು ಕೂಡ್ರಿಸಿದ ಬಳಿಕ ಪುರ ಜನರಿಂದ ಶ್ರೀದೇವಿಯ ಉಡಿ ತುಂಬುವ, ನೈವೇಧ್ಯ ಅರ್ಪಣೆ ನಡೆದು, ಮದ್ಯಾಹ್ನ 12 ಗಂಟೆಗೆ ಓಪನ್ ಮತ್ತು 2 ಗಂಟೆಗೆ ನಾಲ್ಕು ಹಲ್ಲಿನ ಟಗರಿನ ಕಾಳಗ ಸ್ಪರ್ಧೆ ನಡೆಯಲಿದೆ.
ರಾತ್ರಿ ಗ್ರಾಮದ ಪ್ರಮುಖ ಬೀದಿಯಲ್ಲಿ ಶ್ರೀ ದೇವಿಯ ಹೊನ್ನಾಟ ಜರುಗಿ, ಇಲ್ಲಿಯ ಉದ್ದಮ್ಮಾ ಗುಡಿಗೆ ಗ್ರಾಮದೇವತೆ ಮೂರ್ತಿ ತಂದು ಕೂಡ್ರಿಸುವ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ಗ್ರಾಮದೇವಿಯ ಜಾತ್ರಾಮಹೋತ್ಸವ ಆಚರಣೆ ಸಮಿತಿ ತಿಳಿಸಿದೆ.