ಘಟಪ್ರಭಾ:ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ
ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ
ಘಟಪ್ರಭಾ ಜು 17 : ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ನಾನೇ ಮುಂದಾಳುತ್ವ ವಹಿಸುತ್ತೇನೆಂದು ಹೇಳಿರುವ ಬೆಳ್ಳೂಡಿ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೊಡಗು ಮತ್ತು ಬೀದರ ಜಿಲ್ಲೆಗಳಲ್ಲಿ ಕುರುಬರಿಗೆ ಎಸ್.ಟಿ ಮೀಸಲಾತಿ ನೀಡಲಾಗಿದೆ. ಉಳಿದ ಜಿಲ್ಲೆಗಳು ಮೀಸಲಾತಿಯಿಂದ ವಂಚಿತವಾಗಿದ್ದು ಎಲ್ಲಾ ಭಾಗದ ಕುರುಬರನ್ನು ಎಸ್.ಟಿಗೆ ಸೇರಿಸಲು ಶ್ರೀಗಳ ನೇತೃತ್ವದಲ್ಲಿ ಅಧಿಕೃತ ಹೋರಾಟ ಆರಂಭ ಮಾಡಲಾಗಿದ್ದು, ರಾಜ್ಯದ ಎಲ್ಲ ಕುರುಬ ಸಮಾಜದ ಸದಸ್ಯರು ಶ್ರೀಗಳ ಬೆಂಬಲಕ್ಕೆ ನಿಂತು ಹೋರಾಟವನ್ನು ನಡೆಸಬೇಕಾಗಿದೆ.
2016 ರಲ್ಲಿ ಬೆಳಗಾವಿಯಲ್ಲಿ ಲಕ್ಷಕ್ಕೂ ಅಧೀಕ ಜನಸಂಖ್ಯೆಯನ್ನ ಸೇರಿಸಿ ರಾಜ್ಯಮಟ್ಟದ ಕುರುಬರ ಬೃಹತ ಸಮಾವೇಶವನ್ನು ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು. ಅಲ್ಲದೆ ಅನೇಕ ಸಭೆಗಳು, ಬೃಹತ್ ಸಮಾವೇಶ, ಧರಣಿಗಳ ಮೂಲಕ ಹಲವಾರು ಬಾರಿ ಎಸ್.ಟಿ. ಮೀಸಲಾತಿಯ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲುಮತ ಮಹಾಸಭಾದ ರಾಜ್ಯ ಪ್ರತಿನಿಧಿಗಳ ಜೊತೆ ಅಧಿಕೃತ ಸಭೆ ನಡೆಸಿ, ಮೀಸಲಾತಿ ಪ್ರಮಾಣ ಏರಿಸಿ ಎಸ್.ಟಿ.ಗೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಈಗ ಆ ಭರವಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.
ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಅಟ್ರಾಸಿಟಿ ಕೇಸುಗಳಿಂದ ಅಮಾಯಕ ಕುರುಬರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಮುಕ್ತಿ ಸಿಗಬೇಕಾದರೆ ಕುರುಬರು ನೆಮ್ಮದಿಯಿಂದ ಜೀವಿಸಬೇಕಾದರೆ ಎಸ್.ಟಿ. ಮೀಸಲಾತಿ ಅನಿವಾರ್ಯತೆ ಇದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಸಂಘಟೆನೆಯ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳ ಸಭೆ ಕರೆದು ಮುಂದಿನ ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಲಾಗುವುದು. ಹಾಗೂ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಅವರ ಮಾರ್ಗದರ್ಶನದಲ್ಲಿ ಹಾಲುಮತ ಮಹಾಸಭಾದ ಹೋರಾಟ ನಡೆಸಲಿದೆ ಎಂದು ಮಾರುತಿ ಮರಡಿ ಮೌರ್ಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯ ಮಾಧ್ಯಮ ಕಾರ್ಯದರ್ಶಿ ಸೋಮು ಮಲ್ಲೂರ, ಜಿಲ್ಲಾಧ್ಯರಾದ ಡಿ.ಡಿ.ಟೋಪೋಜಿ, ನಿಶಾಂತ ದಳವಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲು ಭೂತಾಳಿ, ತಾಲೂಕಾ ಪ್ರಧಾನ ಕಾರ್ಯದರ್ಶಿಯಾದ ವಿನಾಯಕ ಕಟ್ಟಿಕಾರ ಸೇರಿದಂತೆ ಅನೇಕರು ಇದ್ದರು.