ಮೂಡಲಗಿ:ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ
ಮೂಡಲಗಿ ಜೂ 26 : ವಾರದೊಳಗೆ ಮಸಗುಪ್ಪಿ-ಮೂಡಲಗಿ ರಸ್ತೆಗೆ ಅಂಟಿಕೊಂಡಿರುವ ಧರ್ಮಟ್ಟಿ ಹಳ್ಳದ ಸೇತುವೆಯ ಕಾಮಗಾರಿಯನ್ನು ಕೈಗೊಂಡು ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಸಗುಪ್ಪಿ-ಮೂಡಲಗಿ ಮಾರ್ಗಮದ್ಯ ಧರ್ಮಟ್ಟಿಯಲ್ಲಿರುವ ಹಳ್ಳದ ಸೇತುವೆಯು ಕುಸಿತಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಧರ್ಮಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಜನರಿಗೆ ಅನುಕೂಲವಾಗುವಂತೆ ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
60 ಲಕ್ಷ ರೂ. ಅನುದಾನ : ಧರ್ಮಟ್ಟಿ ಸೇತುವೆಯ ತಡೆಗೋಡೆ ಕುಸಿದಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯು ಮೂಡಲಗಿ ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಒಂದಾಗಿದ್ದು, ಮಸಗುಪ್ಪಿ, ಜೋಕಾನಟ್ಟಿ, ಗುಜನಟ್ಟಿ, ಧರ್ಮಟ್ಟಿ ಹಾಗೂ ಇನ್ನೂ ಅನೇಕ ಗ್ರಾಮಗಳ ಸಾರ್ವಜನಿಕರಿಗೆ ಸಂಪರ್ಕ ರಸ್ತೆಯಾಗಿದೆ. ಈ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ನೀರಾವರಿ ಇಲಾಖೆಯಿಂದ ಈ ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ. ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಧರ್ಮಟ್ಟಿ ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಪರಶುರಾಮ ಸನದಿ, ಲಕ್ಷ್ಮಣ ತೆಳಗಡೆ, ಲಗಮಣ್ಣಾ ಕುಟ್ರಿ, ಲಕ್ಕಪ್ಪ ತೆಳಗಡೆ, ಶ್ರೀಕಾಂತ ದೇಸಾಯಿ, ಮಹಾದೇವ ಬಡ್ಡಿ, ಬನಪ್ಪ ಕೊರಕಪೂಜೇರಿ, ಸಾಬಪ್ಪ ಬಂಡ್ರೊಳ್ಳಿ, ಭರಮಪ್ಪ ಆಶಿರೊಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.