ಗೋಕಾಕ:ಪರಮಾತ್ಮನ ಸೇವೆ ಮಾಡಿ, ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಿ : ರತ್ನಾ ಬಾಳಪ್ಪನವರ

ಪರಮಾತ್ಮನ ಸೇವೆ ಮಾಡಿ, ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಿ : ರತ್ನಾ ಬಾಳಪ್ಪನವರ
ಗೋಕಾಕ ಏ 22 : ಎಲ್ಲರೂ ಹೊಟ್ಟೆಗಾಗಿ, ಬಟ್ಟೆಗಾಗಿ, ತಮ್ಮ ಬದುಕನ್ನು ಮೀಸಲಿಡದೆ ಪರಮಾತ್ಮನ ಸೇವೆ ಮಾಡಿ, ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವಂತೆ ಹಾರುಗೇರಿಯ ಉಪನ್ಯಾಸಕಿ ರತ್ನಾ ಬಾಳಪ್ಪನವರ ಹೇಳಿದರು.
ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಇಲ್ಲಿಯ ಭಾವ ಸಂಗಮದ 157ನೇ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲರೂ ಮಾಡುವುದೂ…? ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ನಾವುಗಳು ಇಂದು ಸ್ವಾರ್ಥಿಗಳಾಗಿ ಆಸೆಯಿಂದ ಎಲ್ಲವೂ ಹೊಟ್ಟೆಬಟ್ಟೆಗಾಗಿ ಎಂದು ತಿಳಿದಿದ್ದೇವೆ. ದುರಾಸೆಯಿಂದ ನಮ್ಮತನವನ್ನು ಮರೆತಿದ್ದೇವೆ. ಆಸೆಯನ್ನು ಬಿಟ್ಟು ಮೂಲ ಕರ್ತವ್ಯವನ್ನು ಮಾಡಬೇಕು. ತಂದೆ-ತಾಯಿ, ಸಮಾಜದ ಋಣ ತೀರಿಸಲು ಏನಾದರೂ ಸೇವೆ ಮಾಡಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ತಿಳಿಸಿದ ಅವರು, ವೈಜ್ಞಾನಿಕ ತಳಹದಿಯ ಮೇಲೆ ರೂಪಿತಗೊಂಡ ನಮ್ಮ ಸಂಸ್ಕಾರದ ಅರಿವನ್ನು ಮಕ್ಕಳಲ್ಲಿ ಮೂಡಿಸಿ ಮತ್ತೆ ಸಾಂಸ್ಕøತಿಕ ವೈಭವನ್ನು ಸ್ಥಾಪಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಭಾವ ಸಂಗಮದ ಅಧ್ಯಕ್ಷ ಮಹಾಂತೇಶ ತಾಂವಶಿ, ಪದಾಧಿಕಾರಿಗಳಾದ ನರೇಂದ್ರ ಪುರಂದರೆ, ಮಲ್ಲಿಕಾರ್ಜುನ ಕಲ್ಲೋಳಿ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ, ರಜನಿ ಜೀರಗ್ಯಾಳ ಇದ್ದರು.
ವಿಜಯಲಕ್ಷ್ಮೀ ಹಿರೇಮಠ ಪ್ರಾರ್ಥಿಸಿದರು, ಶೈಲಾ ಕೊಕ್ಕರಿ ಸ್ವಾಗತಿಸಿದರು, ಎಲ್.ಎಸ್.ಚೌರಿ ವಂದಿಸಿದರು.