ಬೆಳಗಾವಿ:ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ನೀರು ಹರಿಸುವಂತೆ ಮನವಿ

ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ನೀರು ಹರಿಸುವಂತೆ ಮನವಿ
ಬೆಳಗಾವಿ ಏ 16 : ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಒತ್ತಾಯಿಸಿ ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ನೇತೃತ್ವದ ರೈತರ ನಿಯೋಗವು ಸೋಮವಾರದಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಉದ್ಭವಿಸಿದೆ. ಇದರಿಂದ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎರಡೂ ಕಾಲುವೆಗಳು ಹಾಗೂ ನದಿಗೆ ನೀರನ್ನು ಬಿಡುಗಡೆ ಮಾಡುವಂತೆ ರೈತರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಬಂಗಾರವಾದಂತಾಗಿದೆ. ಎಲ್ಲಿಯೂ ನೀರು ದೊರಕುತ್ತಿಲ್ಲ. ಜೊತೆಗೆ ಜಾನುವಾರುಗಳ ಪರಿಸ್ಥಿತಿಯೂ ಕೂಡ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಹ ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಶಾಸಕರು ಸಹ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೆರೆ, ಹಳ್ಳ-ಕೊಳ್ಳಗಳು ತುಂಬಿಕೊಳ್ಳುವ ಸಲುವಾಗಿ ನದಿಗೆ ಮತ್ತು ಕಾಲುವೆಗಳಿಗೆ 10 ದಿನಗಳವರೆಗೆ ನೀರು ಹರಿಸುವಂತೆ ಗೋವಿಂದ ಕೊಪ್ಪದ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೃಷ್ಣಾ ಚನ್ನಾಳ, ರಾಜುಗೌಡ ಪಾಟೀಲ, ಸುಭಾಸ ಹಾವಾಡಿ, ಮುರಿಗೆಪ್ಪ ಹುಬ್ಬಳ್ಳಿ, ರಾಮಣ್ಣಾ ಮುಗಳಖೋಡ, ಬಸು ಕೇರಿ, ಚಿತ್ರನಿರ್ಮಾಪಕ ಬಸು ಭೂತಾಳಿ, ಶಿವಾಜಿ ಪಾಟೀಲ, ಲಕ್ಷ್ಮಣ ಪಾಟೀಲ(ಯರಗಟ್ಟಿ), ಬಸಪ್ಪ ಬಾರ್ಕಿ ಶ್ರೀಪತಿ ಗಣಿ, ಧರೆಪ್ಪ ಮುಧೋಳ, ಅಲ್ಲಪ್ಪ ಕುದರಿಮನಿ, ಸೇರಿದಂತೆ ಯಾದವಾಡ ಜಿಪಂ ವ್ಯಾಪ್ತಿಯ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಅವರು, ಹಿಡಕಲ್ ಜಲಾಶಯದ ಪ್ರಸಕ್ತ ನೀರಿನ ಸ್ಥಿತಿಗತಿಯನ್ನು ಪರಿಶೀಲಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೇವಲ ಕುಡಿಯುವ ನೀರಿಗಾಗಿ ನೀರನ್ನು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.