ಗೋಕಾಕ:ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ
ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ
ಗೋಕಾಕ ನ 9: ತಗ್ಗು, ಗುಂಡಿಗಳು ಬಿದ್ದ ಪಾಮಲದಿನ್ನಿ ಕ್ರಾಸ್ದಿಂದ ಈರಲಟ್ಟಿವರೆಗೆ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪಾಮಲದಿನ್ನಿ ಗ್ರಾಮದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.
ಗುರುವಾರ ಮುಂಜಾನೆ ನಗರದ ಜಿ.ಪಂ. ಕಚೇರಿ ಎದುರು ಸೇರಿದ ಕರವೇ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅಭಿಯಂತರರ ಮುಖಾಂತರ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಹಲವು ವರ್ಷಗಳಿಂದ ತಗ್ಗು,ಗುಂಡಿಗಳು ಬಿದ್ದಿರುವ ಗೋಕಾಕ ತಾಲೂಕಿನ ಪಾಮಲದಿನ್ನಿ ಕ್ರಾಸ್ದಿಂದ ಪಾಮಲದಿನ್ನಿ ಪಂಚಾಯತ ಸರಹದ್ದಿನ ಈರಲಟ್ಟಿವರೆಗಿನ ಸುಮಾರು 7 ಕಿ.ಮೀ. ವರೆಗೆ ರಸ್ತೆ ಹದೆಗೆಟ್ಟು ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳಿಗೆ, ಗ್ರಾಮವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿಗಳನ್ನು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಈ ರಸ್ತೆಯನ್ನು ಅವಲಂಬಿಸಿರುವ ಸಾರ್ವಜನಿಕರು ವಾಹನ ಸಂಚಾರ, ವಿದ್ಯಾರ್ಥಿಗಳು, ರೈತರು ಈ ಮಾರ್ಗವಾಗಿ ಸಂಚರಿಸಲು ಹರಸಾಹಸ ಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯುದ್ದಕ್ಕೂ ಸುಮಾರು 1 ಅಡಿಯಷ್ಟು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸಪಡುತ್ತಿದ್ದಾರೆ. ಮಳೆಗಾಲದ ಸಂದಂರ್ಭದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವ ಸವಾರರನ್ನು ಆ ದೇವರೇ ಕಾಪಾಡಬೇಕು. ಇಂತಹ ಸಂದರ್ಭಗಳಲ್ಲಿ ಇಲ್ಲಿಯ ಹಲವಾರು ಅಪಘಾತಗಳು ಸಂಭವಿಸಿವೆ ರಸ್ತೆ ಹದಗೆಟ್ಟಿದೆ ಎಂಬ ಕಾರಣಕ್ಕೆ ಸಾರಿಗೆ ಇಲಾಖೆಯವರು ಈ ಮಾರ್ಗವಾಗಿ ಬಸ್ಗಳನ್ನು ಓಡುಸುತ್ತಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಮೇಲಾಗಿ ಈ ಮಾರ್ಗವಾಗಿ ಸಂಚರಿಸುವ ದಂಡಾಪೂರ, ಜಾಗನೂರ, ಬಾಗೇವಾಡಿ, ಕೆ.ಕೆ. ಮಮದಾಪೂರ, ಬೆಂಡವಾಡ ಸೆರಿದಂತೆ ಇತರೆ ಪಕ್ಕದ ತಾಲೂಕಿನ ರೈತರು ತರಕಾರಿ ಸಾಗಿಸಲು ಇದೇ ರಸ್ತೆಯನ್ನು ಅವಲಂಭಿಸಿರುವುದರಿಂದ ಈ ರಸ್ತೆಯಲ್ಲಿ ವಾಹನ ಸವಾರರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಯಾವುದೇ ತೊಂದರೆಗಳು ಬಂದರೂ ಸಹ ಇದೇ ರಸ್ತೆಯನ್ನು ಅವಲಂಭಿಸಿರುವ ಲಕ್ಷಾಣುಗಟ್ಟಲೆ ಸಾರ್ವಜನಿಕರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಳೆದ 5-6 ವರ್ಷಗಳಿಂದ ದುರಸ್ಥಿ ಭಾಗ್ಯವನ್ನು ಕಾಣದ ಈ 7 ಕಿ.ಮೀ. ರಸ್ತೆಯನ್ನು ಡಾಂಬರೀಕರಣಗೊಳಿಸಿ ಈ ರಸ್ತೆಯನ್ನು ಅವಲಂಬಿಸಿರುವ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಪಡುತ್ತಿರುವ ನರಕಯಾತನೆಯಿಂದ ಪಾರು ಮಾಡಬೇಕೆಂದು ಸಮಸ್ತ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಸಾರ್ವಜನಿಕರ ಪರವಾಗಿ ಕರವೇ ಪಾಮಲದಿನ್ನಿ ಶಾಖೆಯು ಮನವಿ ಮೂಲಕ ವಿನಂತಿಸಲಾಗಿದೆ.
ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಈ ರಸ್ತೆಯ ಮದ್ಯದಲ್ಲಿ ಹಡ್ಡಿ ಗಿಡಗಳನ್ನು ನೆಟ್ಟು ಪ್ರತಿಭಟಿಸಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ್ ಹಂಜಿ, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ವಸಂತ ಹಂಜಿ, ಶೆಟ್ಟೆಪ್ಪಾ ಗಾಡಿವಡ್ಡರ, ಮಲ್ಲು ಸಂಪಗಾರ, ರಮೇಶ ಕಮತಿ, ರವಿ ನಾವಿ, ಮಲ್ಲಪ್ಪ ತಲೆಪ್ಪಗೋಳ, ರಮೇಶ ಕೆ., ನಿಯಾಜ ಪಟೇಲ್, ಅಪ್ಪಯ್ಯಾ ತಿಗಡಿ, ವಿಠ್ಠಲ ಹೂಲಿಕಟ್ಟಿ, ವಿಠ್ಠಲ ಸಣ್ಣಕ್ಕಿ, ಸುರೇಶ ಹುಣಶ್ಯಾಳ, ಆನಂದ ಕದಮ್, ಮಂಜು ಗಾಡಿವಡ್ಡರ, ಮಲ್ಲಪ್ಪ ಕೌಜಲಗಿ, ಮಾರುತಿ ಹಂಜಿ, ಬಸಪ್ಪ ಕುರಣಿ, ದುಂಡಪ್ಪ ಭಾವಿಕಟ್ಟಿ, ಸಿದ್ದಪ್ಪ ಹಣಬರಟ್ಟಿ, ವಿಠ್ಠಲ ಹಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.