ಗೋಕಾಕ:ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ.ವಾಯ್.ಎಸ್.ಪಿ ಮುಲ್ಲಾ

ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ.ವಾಯ್.ಎಸ್.ಪಿ ಮುಲ್ಲಾ
ಗೋಕಾಕ ಮಾ 6 : ಹೋಳಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಸಮುದಾಯ ಭವನದಲ್ಲಿ ಗುರುವಾರದಂದು ಶಹರ ಪೊಲೀಸ್ ಠಾಣೆ ವತಿಯಿಂದ ಶಾಂತಿಸಭೆ ನಡೆಯಿತು.
ಡಿ.ವಾಯ್.ಎಸ್.ಪಿ ಡಿ.ಎಚ್. ಮುಲ್ಲಾ ಮಾತನಾಡಿ, ಹಿಂದಿನಿಂದಲೂ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ರಾಸಾಯನಿಕ ಬಣ್ಣ ಬಳಸದೆ, ಒಣಬಣ್ಣ ಬಳಸುವುದು ಸೂಕ್ತ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಿಪಿಐ ಸುರೇಶಬಾಬು ಮಾತನಾಡಿ, ಹಬ್ಬದ ನೆಪದಲ್ಲಿ ಕಾನೂನು ಮೀರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬಗಳನ್ನು ಎಲ್ಲರೂ ಸೇರಿ ಶಾಂತಿಯುವಾಗಿ ಆಚರಿಸಬೇಕು. ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಸಂದೇಶಗಳನ್ನು ಹರಿಯಬಿಡಬಾರದು, ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪಿಎಸ್ಐಗಳಾದ ಕೆ.ವಾಲಿಕರ, ಕಿರಣ ಮೋಹಿತೆ, ನಗರಸಭೆ ಸದಸ್ಯ ಕುತುಬುದ್ದೀನ ಗೋಕಾಕ, ಪ್ರಭಾಕರ ಚವ್ಹಾಣ ಅಡಿವೆಪ್ಪ ಕಿತ್ತೂರ ಮತ್ತಿತರರಿದ್ದರು.