ಚಿಕ್ಕೋಡಿ :ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸಿ : ತಹಸೀಲ್ದಾರಗೆ ಕರವೇ ಮನವಿ
ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸಿ : ತಹಸೀಲ್ದಾರಗೆ ಕರವೇ ಮನವಿ
ಚಿಕ್ಕೋಡಿ ಅ 16: ತಾಲೂಕಿನ ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಸಿ.ಎಸ್.ಕುಲಕರ್ಣಿಯವರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷರು ನಗರ ಸಭೆ ನಿಪ್ಪಾಣಿ ಎಂದು ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಲಾಗಿದೆ. ಮರಾಠಿ ಭಾಷಾ ನಾಮಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಅಳವಡಿಸುವಂತೆ ಅಗಸ್ಟ್ ತಿಂಗಳಲ್ಲಿ ನಗರಸಭೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿತ್ತು.
ತಕ್ಷಣ ಮರಾಠಿ ನಾಮಫಲಕ ತೆರವುಗೊಳಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಸಂಗತಿ ಎಂದರು. ಬರುವ ನವ್ಹೆಂಬರ 1 ರೊಳಗೆ ಮರಾಠಿ ಭಾಷೆ ನಾಮಫಲಕ ತೆರವುಗೊಳಿಸಬೇಕು.
ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದಲೇ ನಿಪ್ಪಾಣಿ ನಗರ ಸಭೆ ಅಧ್ಯಕ್ಷರ ವಾಹನಕ್ಕೆ ಅಳವಡಿಸಿರುವ ಮರಾಠಿ ಭಾಷೆಯ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷಾ ನಾಮಫಲಕ ಅಳವಡಿಸುವ ಜತೆಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾಗೇಶ ಮಾಳಿ, ಮಲ್ಲಿಕಾರ್ಜುನ ಶಿಂಗೆ, ಸಂಜು ಬಡಿಗೇರ, ದಾದಾ ಜಮದಾಡೆ, ಅನೀಲ ಕೋಳಿ, ಬಾಳಕೃಷ್ಣ ಸನದಿ, ಅನೀಲ ಮಾಳಿ, ಸುನೀಲ ತೆರದಾಳೆ ಮುಂತಾದವರು ಉಪಸ್ಥಿತರಿದ್ದರು.