ಹುಕ್ಕೇರಿ:ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ : ಬಾಬಾ ರಾಮದೇವ್
ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ : ಬಾಬಾ ರಾಮದೇವ್
ಹುಕ್ಕೇರಿ ಸೆ 24: ಲಿಂಗಾಯತ ಮತ್ತು ವಿರಶೈವರು ಬೇರೆ ಬೇರೆಯಲ್ಲ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಯೋಗ ಗುರು ಬಾಬಾ ರಾಮದೇವ ಹೇಳಿದರು .
ಹುಕ್ಕೇರಿ ಪಟ್ಟಣದ ಎಸ್.ಕೆ.ಹೈಸ್ಕೂಲ್ ಮೈದಾನದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ದಸರಾ ಉತ್ಸವ ಅಂಗವಾಗಿ ಕೋಡಲ್ಪಡುವ ರೇಣುಕ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸದ್ಯ ಕರ್ನಾಟಕದಲ್ಲಿ ನಡೆದಿರುವ ವಿರಶೈವ ಹಾಗೂ ಲಿಂಗಾಯತ ಎನ್ನುವ ಧರ್ಮಗಳ ವಿವಾದವನ್ನು ಪ್ರಸ್ತಾಪಿಸಿ, ನಾವೆಲ್ಲರೂ ಭಾರತೀಯರು, ಜಾತಿ, ಧರ್ಮಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದರು.
ಬಸವಣ್ಣ ನಾವು ಮಾಡುವ ಕೆಲಸವನ್ನು ಶ್ರದ್ಧಾ, ಭಕ್ತಿಯಿಂದ ಮಾಡಿದರೆ ಅದುವೆ ಕೈಲಾಸ ಎಂದು ಹೇಳಿದ್ದಾರೆ. ತಾವು ಜೀವನದಲ್ಲಿ ಎಂದು ಪ್ರಶಸ್ತಿ ಸ್ವೀಕರಿಸಿಲ್ಲ. ಭಾರತ ಸರ್ಕಾರ ನೀಡುವ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗೆ ತಮ್ಮ ಹೆಸರು ಪ್ರಸ್ತಾಪಿಸಿದರು ತಾವು ಪ್ರಶಸ್ತಿಯನ್ನು ತಿರಸ್ಕರಿಸಿರುವೆ, ಆದರೆ ದೇವರ ಹೆಸರಿನ ಪ್ರಶಸ್ತಿಯಾಗಿದ್ದರಿಂದ ರೇಣುಕ ಶ್ರೀ ಪ್ರಶಸ್ತಿ ಸ್ವೀಕರಿಸಿರುವುದಾಗಿ ಬಾಬಾ ರಾಮದೇವ ತಿಳಿಸಿದರು.
ದೇಶದ ಹಣ ದೇಶದಲ್ಲಿ ಉಳಿಯಬೇಕಾದರೆ ವಿದೇಶಿ ವಸ್ತು ಉಪಯೋಗಿಸಬಾರದು. ಪತಂಜಲಿ ಉತ್ಪಾದನೆಗಳ ನೂರರಷ್ಟು ಲಾಭವನ್ನು ದೇಶಕ್ಕಾಗಿ, ಬಡವರಿಗಾಗಿ ಉಪಯೋಗಿಸಲಾಗುವುದು ಎಂದರು.
ಕನ್ನಡದಲ್ಲಿ ಮಾತು ಆರಂಭಿಸಿ ಗಮನ ಸೆಳೆದ ರಾಮ್ದೇವ್ :
ನನ್ನ ಸಹೋದರ, ಸಹೋದರಿಯರೇ ನಮಸ್ಕಾರ ಎನ್ನುತ್ತಾ ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಬಾಬಾ ರಾಮದೇವ ಅವರಿಗೆ ಚಪ್ಪಾಳೆಯ ಮೂಲಕ ಸ್ವಾಗತಿಸಲಾಯಿತು. ಕರ್ನಾಟಕದ ಜನತೆ ಆಧ್ಯಾತ್ಮಿಕ, ದೇಶ ಭಕ್ತರಾಗಿದ್ದಾರೆ ಎಂದು ಕನ್ನಡದಲ್ಲಿ ಹೇಳಿದ ಅವರು ತಮಗೆ ಕನ್ನಡ ಭಾಷೆ ತಿಳಿಯುತ್ತದೆ ಮಾತನಾಡಲು ಮಾತ್ರ ಬರುವುದಿಲ್ಲ ಎಂದು ಹೇಳಿದರು