RNI NO. KARKAN/2006/27779|Thursday, July 31, 2025
You are here: Home » breaking news » ಬೆಳಗಾವಿ:ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಮತ್ತೊಂದು ಗೋಲ್‌ಮಾಲ್

ಬೆಳಗಾವಿ:ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಮತ್ತೊಂದು ಗೋಲ್‌ಮಾಲ್ 

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಮತ್ತೊಂದು ಗೋಲ್‌ಮಾಲ್

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 20 : 

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಮತ್ತೊಂದು ಗೋಲ್‌ಮಾಲ್ ಪತ್ತೆಯಾಗಿದೆ. ರೈತರಿಗೆ ಬಾಕಿ ಹಣ ಕೊಡದೆ ವಂಚನೆ ಬಳಿಕ ಮತ್ತೊಂದು ಹಗರಣ ಬಯಲಾಗಿದೆ. ಕಾರ್ಖಾನೆ ಕಬ್ಬು ಪೂರೈಸಿದ ರೈತರಿಗಷ್ಟೇ ಅಲ್ಲದೇ ಕಾರ್ಖಾನೆಗೆ ಸಂಬಂಧ ಇಲ್ಲದ ಅಮಾಯಕರಿಗೂ ಮೋಸ ಮಾಡಿದೆ.

ಬೆಳಗಾವಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವಿಮಾ, ಆರ್ಥಿಕ ನೆರವು ನಿಡುವುದಾಗಿ ಜನರಿಂದ ದಾಖಲೆ ಸಂಗ್ರಹ ಮಾಡಿತ್ತು. ಎಂ.ಕೆ. ಹುಬ್ಬಳ್ಳಿ ಪಟ್ಟಣದ ದಲಿತ ಕಾಲೋನಿಯಲ್ಲಿ ದಾಖಲೆ ಸಂಗ್ರಹ ಮಾಡಲಾಗಿತ್ತು. ಜನ ಆಧಾರ್ ಕಾರ್ಡ್, ವೋಟರ್ ಐಡಿ ಪಡೆದು ಬ್ಯಾಂಕ್‌ನಲ್ಲಿ ಸಾಲ ಪಡೆಯಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯವರು 40 ಪುಟದ ಡಾಕ್ಯುಮೆಂಟ್ಗೆ ಸಹಿ ಹಾಕಿಸಿಕೊಂಡಿದ್ದಾರೆ. ಎಲ್ಲರ ಹೆಸರಿನಲ್ಲಿ ಬ್ಯಾಂಕ್ ಆಫ್ ಇಂಡಿಯಾ ಎ‌ಂ.ಕೆ.ಹುಬ್ಬಳ್ಳಿ ಶಾಖೆಯಲ್ಲಿ ಸಾಲ ಪಡೆಯಲಾಗಿದೆ.

ಕಬ್ಬು ಕಟಾವ್ ಕಾರ್ಮಿಕರು ಎಂದು ಹೇಳಿ ಕಾರ್ಖಾನೆ ಗ್ಯಾರಂಟಿ ಮೇಲೆ ಸಾಲ ಪಡೆಯಲಾಗಿದೆ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 169 ಜನರ ದಾಖಲೆ ನೀಡಿ ತಲಾ ಒಬ್ಬರ ಹೆಸರಿನಲ್ಲಿ 8 ಲಕ್ಷ ರೂಪಾಯಿ ಸಾಲ ಪಡೆದಿದೆ. ಕಾರ್ಖಾನೆ ತಮ್ಮ ಹೆಸರಿನಲ್ಲಿ ಸಾಲ ಪಡೆದಿದೆ ಎಂಬುದು ಅಮಾಯಕರಿಗೆ ಗೊತ್ತೇ ಇಲ್ಲ. ಸದ್ಯ ಗ್ರಾಮದ ಕಲ್ಲಪ್ಪ ಯಲ್ಲಪ್ಪ ಚಲವಾದಿ ಎ‌ಂಬ ಯುವಕ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 20 ಸಾವಿರ ರೂ. ಸಾಲಕ್ಕಾಗಿ ಅರ್ಜಿ ಹಾಕಿದ್ದರು. ಬ್ಯಾಂಕ್ ಸಿಬ್ಬಂದಿ ಕಲ್ಲಪ್ಪ ಚಲವಾದಿಗೆ ನೀಡಿದ ಉತ್ತರ ಕೇಳಿ ಯುವಕ ಶಾಕ್ ಆಗಿದ್ದಾನೆ. ನಿಮ್ಮ ಹೆಸರಿನಲ್ಲಿ ಈಗಾಗಲೇ ಸಾಲ ಇದೇ ಮತ್ತೆ ಕೊಡೋಕೆ ಬರಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಯುವಕನಿಗೆ ಸಾಲ ಕೊಡಲು ನಿರಾಕರಿಸಿದ್ದಾರೆ.

169 ಜನರ ಹೆಸರಲ್ಲಿ 16 ಕೋಟಿಗೂ ಹೆಚ್ಚಿನ ಹಣ ಸಾಲ ಈ ಉತ್ತರದಿಂದ ಬೆಚ್ಚಿಬಿದ್ದ ಯುವಕ ಬ್ಯಾಂಕ್ಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ದೊಡ್ಡ ಗೋಲ‌್‌ಮಾಲ್ ಬಹಿರಂಗವಾಗಿದೆ. 2021ರ ಮೇ ತಿಂಗಳ 28ರಂದು ಸಾಲ ತೆಗೆಯಲಾಗಿದೆ. 8 ಲಕ್ಷಕ್ಕೆ 25 ಸಾವಿರ ಹಣ ಬಡ್ಡಿ ಸಹ ಸೇರ್ಪಡೆಯಾಗಿದೆ. 169 ಜನರ ಹೆಸರಲ್ಲಿ 16 ಕೋಟಿಗೂ ಹೆಚ್ಚಿನ ಹಣ ಸಾಲ ಪಡೆಯಲಾಗಿದೆ. ಅಮಾಯಕ ಜನರಿಗೆ ಅವರ ಹೆಸರಿನಲ್ಲಿ ಲೋನ್ ಇರೋದೆ ಗೊತ್ತಿಲ್ಲ.  ಆರ್.ಬಿ.ಐ ನಿಯಮ ಉಲ್ಲಂಘನೆ ಮಾಡಿ 60 ವರ್ಷ ಮೇಲ್ಪಟ್ಟವರ ಹೆಸರಲ್ಲೂ ಲೋನ್ ತೆಗೆದಿದ್ದಾರೆ. ಕಬ್ಬು ಕಟಾವ್, ಸಾಗಾಟ (H&T Loan) ಎಂದು ಪ್ರತಿಯೊಬ್ಬರ ಹೆಸರಿನಲ್ಲಿ ಸಾಲ ಪಡೆಯಲಾಗಿದೆ.

ಸ್ವಂತ ಜಮೀನು ಇಲ್ಲದವರಿಗೂ ಕಬ್ಬು ಸಾಗಟ, ಕಟಾವ್ ಸಾಲ ಇದೆ. ಕಾರ್ಖಾನೆಗೆ ಸಂಬಂಧವೇ ಇಲ್ಲದ ಜನರಿಗೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲದ ಹೊರೆ ಏರಿಸಿದೆ. ಈ ಸಂಬಂಧ ಬ್ಯಾಂಕ್ ಬಳಿ ರೈತರು ಪ್ರತಿಭಟನೆ‌ ನಡೆಸಿದ್ದರು. ರೈತ ಮಹಿಳೆ ಜಯಶ್ರೀ ಗುರವನ್ನವರ್ ನೇತೃತ್ವದಲ್ಲಿ ಬ್ಯಾಂಕ್ ಗೆ ಹೋಗಿ ಪ್ರತಿಭಟನೆ ನಡೆಸಿದ್ರು. 8 ದಿನದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್ ಮ್ಯಾನೇಜರ್ ಪತ್ರದ ಮೂಲಕ ಭರವಸೆ ನೀಡಿದ್ರು. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ಡಿಸಿ ಮೂಲಕ ಸಕ್ಕರೆ ಸಚಿವರಿಗೆ ಮನವಿ ಮಾಡಲಾಗಿದೆ.

 

Related posts: