ಗೋಕಾಕ:ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಮೋದಿ ಸರಕಾರ ಹೆಜ್ಜೆಯಿಡುತ್ತಿದ್ದೆ : ಶಾಸಕ ರಮೇಶ ಜಾರಕಿಹೊಳಿ
ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಮೋದಿ ಸರಕಾರ ಹೆಜ್ಜೆಯಿಡುತ್ತಿದ್ದೆ : ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ಪಂ. ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಹೆಜ್ಜೆಯಿಡುತ್ತಾ ಮುಂದೆ ಸಾಗುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಶಾಸಕರ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಹಮ್ಮಿಕೊಂಡ ಪಂ . ದೀನದಯಾಳ ಉಪಾಧ್ಯಾಯರವರ 105ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪಾಧ್ಯಾಯರು ವಿರೋಧಿಗಳೂ ಒಪ್ಪುವಂತಹ ತಾರ್ಕಿಕ ವಿಶ್ಲೇಷಣಾ ಶಕ್ತಿ ಹೊಂದಿದ್ದರು. ಪರಂಪರೆಯ ಬೇರಿನೊಂದಿಗೆ ಅಧುನಿಕತೆಯ ತೇರು ಎಳೆಯುವ ಸಂಕಲ್ಪ ಅವರದ್ದಾಗಿತ್ತು.ಸಂಸ್ಕಾರದಿಂದ ಕೂಡಿದ ರಾಷ್ಟ್ರ ನಿರ್ಮಾಣವೇ ನಮ್ಮ ಅಂತಿಮ ಧ್ಯೇಯವಾಗಬೇಕು ಎಂದು ಅವರು ಹಲವು ಬಾರಿ ಪ್ರತಿಪಾದಿಸಿದ್ದರು. ಭಾರತೀಯ ಜನಸಂಘದ ಸ್ಥಾಪಕರಾದ ಶ್ಯಾಂ ಪ್ರಸಾದ್ ಮುಖರ್ಜಿ ಅವರು ‘ಮತ್ತೊಬ್ಬ ದೀನದಯಾಳರು ನನ್ನ ಜೊತೆ ಇದ್ದಿದ್ದರೆ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸುತ್ತೇನೆ’ ಎಂದು ಉದ್ಗರಿಸಿದ್ದು ದೀನದಯಾಳರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಮಹಾನ ನಾಯಕ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವಿಂದು ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಬೇಕಾಗಿದೆ ಎಂದ ಅವರು ಕಾರ್ಯಕರ್ತರು ಪಕ್ಷ ನೀಡುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪಕ್ಷವನ್ನು ಬಲಪಡಿಸಲು ಕಂಕಣಬದ್ದರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಹಾಲಿ ಅಧ್ಯಕ್ಷರುಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಸತ್ಕರಿಸಿ ಗೌರವಿಸಿದರು.
ಭಾರತೀಯ ಗ್ರಾಮೀಣ ಹಾಗೂ ನಗರ ಘಟಕದ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ಮೋದಿ ಹುಟ್ಟು ಹಬ್ಬದ ಶುಭಾಶಯ ಕೋರಲು ಬರೆದ 2 ಸಾವಿರ ಅಂಚೆ ಪತ್ರಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಬಿಡುಗಡೆ ಗೋಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಬಸವರಾಜ ಹಿರೇಮಠ, ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರಗೌಡಪ್ಪಗೋಳ, , ನರಗಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಹಿರಿಯ ಮುಖಂಡರಾದ ಎಂ ಬಿ ಅಂಗಡಿ , ಸುರೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.