ಗೋಕಾಕ:ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ
ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ
ಗೋಕಾಕ ಸೆ 16: ಸ್ವಾಭಿಮಾನಿ ಕೋಲಿ, ಅಂಬಿಗೇರ, ತಳವಾರ ಸಮುದಾಯದಿಂದ ಎಸ್.ಟಿ. ಮೀಸಲಾತಿಗಾಗಿ ಆಗ್ರಹಿಸಿ ಅ. 10 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ್ಯಾಲಿ ಅಂಗವಾಗಿ ನಗರದ ಅಂಬಿಗೇರ ಗಲ್ಲಿಯ ಶ್ರೀ ಹನುಮಾನ ಮಂದಿರದಲ್ಲಿ ಗೋಕಾಕ ತಾಲೂಕಾ ಗಂಗಾಮತಸ್ಥರ ಯುವಜನ ಸಂಘದ ಆಶ್ರಯದಲ್ಲಿ ಶನಿವಾರದಂದು ಪೂರ್ವಭಾವಿ ಸಭೆ ಜರುಗಿತು.
ಪೂರ್ವಭಾಂವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೋಲಿ,ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಅವರು, ಈ ಹಿಂದೆ ನಮ್ಮ ಸಮುದಾಯದ ಟೋಕರೆ ಕೋಳಿ, ಕೋಯಾ, ಕೊಲ್ಟಾ, ಕೋಳಿ ಡೋರ, ಇವರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡುತ್ತಿದ್ದರು. ಆದರೆ ಯಾವುದೇ ಮುನ್ಸೂಚನೆಯನ್ನು ನೀಡದೇ ಏಕಾಏಕಿ ನಿಲ್ಲಿಸಿ ಹಲವಾರು ವರ್ಷಗಳನ್ನು ಕಳೆದಿವೆಯಲ್ಲದೇ ಎಸ್ಟಿ ಮೀಸಲಾತಿಯಡಿ ಸರ್ಕಾರಿ ನೌಕರಿ ಪಡೆದ ನೌಕರಸ್ಥರ ಮೇಲೆ ಸರ್ಕಾರ ವಿನಾಕಾರಣ ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ್ದು, ನಮ್ಮ ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ. ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುವ ನಿಟ್ಟಿನಲ್ಲಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು ಈ ರ್ಯಾಲಿಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ರ್ಯಾಲಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ನಮ್ಮ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಗಮಣ್ಣ ತೋರಗಲ್, ಸುರೇಶ ಕೋಳಿ ಮುದಕಪ್ಪ ತಳವಾರ, ಕೃಷ್ಣಾ ನಾಶಿ,ಮಲ್ಲು ಕೋಳಿ ಬಿ.ಬಿ.ಹೊಸಮನಿ, ಬಸು ಮೋತ್ಯಾಗೋಳ, ಲಕ್ಕಪ್ಪ ಪೂಜೇರಿ, ಲಕ್ಷ್ಮಣ ಯಮಕನಮರಡಿ, ಯಲ್ಲಪ್ಪ ಪೂಜೇರಿ, ಪರಶುರಾಮ ಕಾಳಮ್ಮನಗುಡಿ, ಕಾಶಿನಾಥ ಕೋಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಇದ್ದರು.