ಗೋಕಾಕ : ಕೊರೋನಾ : ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ರಾಘವೇಂದ್ರ ಖೋತ
ಕೊರೋನಾ : ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ರಾಘವೇಂದ್ರ ಖೋತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 29 :
ಕೊರೋನಾ ಸಂಧರ್ಭದಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ರಾಘವೇಂದ್ರ ಖೋತಗೆ ಸ್ಥಳೀಯರ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜನತಾ ಕರ್ಪ್ಯೂನ ನೆಪದಲ್ಲಿ ರಾಜ್ಯಾದ್ಯಂತ ಪೊಲೀಸರು ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಲಾಟಿ ಮೂಲಕ ಬೆದರಿಸುತ್ತಿರುವ ಸಂಧರ್ಭದಲ್ಲಿ ಗೋಕಾಕ ಶಹರ ಪೊಲೀಸ ಠಾಣೆಗೆ ಪ್ರಭಾರಿ ಎಸ್.ಐ ಯಾಗಿ ಬಂದಿರುವ ರಾಘವೇಂದ್ರ ಖೋತ ಅವರು ಮಾತ್ರ ಸಾರ್ವಜನಿಕರೊಂದಿಗೆ, ವ್ಯಾಪಾರಸ್ಥರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ಪ್ರೀತಿಯಿಂದ ತಿಳಿಹೇಳಿ ಅಂಗಡಿ ಮುಗ್ಗಟ್ಟುಗಳನ್ನು ಸಮಯಕ್ಕೆ ಸರಿಯಾಗಿ ಬಂದ ಮಾಡುವಂತೆ ವಿನಂತಿಸುತ್ತಿದ್ದಾರೆ. ಇವರ ವಿನಂತಿಯನ್ನು ಅಷ್ಟೇ ಗೌರವದೊಂದಿಗೆ ಒಪ್ಪಿಕೊಳ್ಳುತ್ತಿರುವ ಅಂಗಡಿಕಾರರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಪಿಎಸ್ಐ ರಾಘವೇಂದ್ರ ಖೋತ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳುತ್ತಿದ್ದಾರೆ.
ನಗರದಲ್ಲಿ ಪೆಟ್ರೋಲಿಂಗೆ ಹೋಗುವ ಪೊಲೀಸರಿಗೆ ಪಿಎಸ್ಐ ರಾಘವೇಂದ್ರ ಖೋತ ಅವರು ಸಾರ್ವಜನಿಕರಿಗೆ , ವ್ಯಾಪಾರಸ್ಥರಿಗೆ ಆವಾಜ ಹಾಕಬೇಡಿ, ಅವಾಚ್ಯ ಶಬ್ದಗಳಿಂದ ನಿಂಧಿಸಬೇಡಿ, ಅನಾವಶ್ಯಕವಾಗಿ ಹೊಡೆಯಬೇಡಿ ಎಂದು ಖಡಕ್ಕಾಗಿ ಹೇಳಿ ಕಳುಹಿಸುತ್ತಾರೆ. ಅವರು ಹೇಳಿದಂತೆ ಪೊಲೀಸರು ಸಹ ಸಾರ್ವಜನಿಕರೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳುತ್ತಿರುವ ದೃಶ್ಯಗಳು ನಗರದಲ್ಲಿ ಅಲ್ಲಲ್ಲಿ ಕಂಡುಬರುತ್ತಿವೆ.
ಗೋಕಾಕ ಶಹರ ಪಿಎಸ್ಐ ವಾಲಿಕರ ಅವರು ರಜೆಯ ಮೇಲೆ ತೆರಳಿರುವುದರಿಂದ ಘಟಪ್ರಭಾದಿಂದ ಗೋಕಾಕ ಶಹರ ಠಾಣೆಗೆ ಪ್ರಭಾರಿಯಾಗಿ ಬಂದಿರುವ ಪಿಎಸ್ಐ ರಾಘವೇಂದ್ರ ಖೋತ ಅವರು ಕೇವಲ ನಾಲ್ಕೈದು ದಿನಗಳಲ್ಲಿಯೇ ಗೋಕಾಕ ನಗರದ ಸಾರ್ವಜನಿಕರ ಮನ ಗೆದ್ದು ಪೊಲೀಸ ಇಲಾಖೆ ಜನಸ್ನೇಹಿ ಇಲಾಖೆ ಎಂದು ಮತ್ತೊಮ್ಮೆ ಸಾಬಿತುಪಡಿಸಿದ್ದಾರೆ.