ಗೋಕಾಕ:ಸಾಹಿತ್ಯ ಸಮ್ಮೇಳನ ಕೇವಲ ಅಕ್ಷರ ಜಾತ್ರೆಯಾಗಿರದೇ, ಅರಿವಿನ ಯಾತ್ರೆಯಾಗಿರಬೇಕು : ಡಾ. ವಿ.ಎಸ್.ಮಾಳಿ
ಸಾಹಿತ್ಯ ಸಮ್ಮೇಳನ ಕೇವಲ ಅಕ್ಷರ ಜಾತ್ರೆಯಾಗಿರದೇ, ಅರಿವಿನ ಯಾತ್ರೆಯಾಗಿರಬೇಕು : ಡಾ. ವಿ.ಎಸ್.ಮಾಳಿ
ಕಲಾಶ್ರೀ ನಿಂಗಯ್ಯಸ್ವಾಮಿ ಪೂಜಾರಿ ವೇದಿಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 28 :
ಸಾಹಿತ್ಯ ಸಮ್ಮೇಳನ ಕೇವಲ ಅಕ್ಷರ ಜಾತ್ರೆಯಾಗಿರದೇ, ಅರಿವಿನ ಯಾತ್ರೆಯಾಗಿರಬೇಕು ಎಂದು ಹಾರುಗೇರಿಯ ಹಿರಿಯ ಸಾಹಿತಿ ಕನ್ನಡ ಪ್ರಾಧ್ಯಾಪಕ ಡಾ. ವಿ.ಎಸ್.ಮಾಳಿ ಅಭಿಪ್ರಾಯಿಸಿದರು.
ಶನಿವಾರ ಇಲ್ಲಿನ ಫಾಲ್ಸ್ ರಸ್ತೆಯ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದಲಿ ಏರ್ಪಡಿಸಲಾಗಿದ್ದ ಗೋಕಾಕ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತತ್ವ ಸಿದ್ಧಾಂತಗಳಿಂದ ಕೂಡಿದ ಕನ್ನಡ ಸಾಹಿತ್ಯ ಇತರ ಸಾಹಿತ್ಯಗಳ ತಳಹದಿಯಾಗಿದೆ ಎಂದು ಬಣ್ಣಿಸಿದರು.
ಗೋಕಾವಿ ನಾಡು ಸಾಹಿತಿಗಳ ಬೀಡು ಎಂದು ಬಣ್ಣಿಸಿದ ವಿ.ಎಸ್.ಮಾಳಿ ಅವರು, ಅಂದು ಜಾನಪದ ಅಧ್ಯಯನದ ಮಾದರಿ ನಾಡು ಗೋಕಾವಿ ಮತ್ತು ಬೆಟಗೇರಿ ಕೃಷ್ಣಶರ್ಮರನ್ನು ಸಾಹಿತ್ಯ ಲೋಕಕ್ಕೆ ನೀಡಿದ ನಾಡು ಗೋಕಾವಿ, ಇಂದು ರಾಜ್ಯದ ರಾಜಕೀಯಕ್ಕೂ ಗೋಕಾವಿ ನಾಡು ದಿಕ್ಸೂಚಿಯಂತಿಲ್ಲವೇ ? ಎಂದು ಪರೋಕ್ಷ ಮಾತುಗಳನ್ನಾಡಿದರು.
ಮೀಸಲಾತಿ ವಿಚಾರ ಎಂಬುದು ಜೇನು ಗೂಡಿಗೆ ಕಲ್ಲೆಸೆದಂತೆ ಎನ್ನುತ್ತ, ಗೋಷ್ಠಿಯಲ್ಲಿ ‘ಗಾಂಧೀ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಮದವಾಲದ ಹಿರಿಯ ಸಾಹಿತಿ ಪ್ರೊ. ಸುರೇಶ ಮುದ್ದಾರ, ‘ಬಸವಣ್ಣನವರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಬಳೋಬಾಳದ ಹಿರಿಯ ಸಾಹಿತಿ ಡಾ. ಸುರೇಶ ಹನಗಂಡಿ ಮತ್ತು ‘ಡಾ. ಸಿ.ಕೆ.ನಾವಲಗಿ ಅವರ ಸಾಹಿತ್ಯ ಸಾಧನೆ’ ಕುರಿತು ಉಪನ್ಯಾಸ ನೀಡಿದ ಇಲ್ಲಿನ ಸಾಹಿತಿ ಪ್ರಾ. ಜಯಾನಂದ ಮಾದರ ಮತ್ತು ‘ಅಂಬೇಡ್ಕರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಹಾಗೂ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಎ.ವೈ.ಪಂಗಣ್ಣವರ ಅವರ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸುತ್ತ, ಮೀಸಲಾತಿಯ ಮಿತಿಯನ್ನು ಶೇ. 25ಕ್ಕೆ ಸೀಮಿತಗೊಳಿಸಬೇಕು ಮತ್ತು ಶೇ. 75ರಷ್ಟು ಕ್ಷೇತ್ರವನ್ನು ಪ್ರತಿಭೆಗಳಿಗೆ ಮುಕ್ತವಾಗಿರಿಸಬೇಕೆಂಬ ಅಭಿಪ್ರಾಯಕ್ಕೆ ತಮ್ಮದೂ ಬೆಂಬಲವಿದೆ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ವಸಂತರಾವ ಕುಲಕರ್ಣಿ ಅವರು ಉಪನ್ಯಾಸಕರ ಅಭಿಪ್ರಾಯಗಳಿಂದ ಅಂತರ ಕಾಯ್ದುಕೊಂಡು ಸಭಿಕರ ಗಮನ ಸೆಳೆದರು.
ಡಾ. ಎಸ್.ಬಿ.ಹೊಸಮನಿ ಸ್ವಾಗತಿಸಿದರು. ಭಾರತಿ ಮದಬಾವಿ ಆಶಯ ನುಡಿಗಳನ್ನಾಡಿದರು. ಶಿಕ್ಷಕ ಎಸ್.ಕೆ.ಮಠದ ಮತ್ತು ಪ್ರೊ. ಸುನಂದಾ ಮಾದರ ನಿರೂಪಿಸಿದರು. ವೀಣಾ ತಮ್ಮಣ್ಣಿ ವಂದಿಸಿದರು.