ಮೂಡಲಗಿ:ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ
ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ
ಮೂಡಲಗಿ ಸೆ 5 : ‘ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಶಿಕ್ಷಣ ರಂಗದ ಕೊಡುಗೆ ಅಪಾರ’ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರದಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣವೊಂದೇ ದೊಡ್ಡ ಅಸ್ತ್ರವಾಗಿದೆ ಎಂದು ಹೇಳಿದರು.
ಮೂಡಲಗಿ ಶೈಕ್ಷಣಿಕ ವಲಯ ಶಿಕ್ಷಣ ರಂಗದಲ್ಲಿ ಹೆಮ್ಮೆಯ ಸಾಧನೆಗೈದಿದೆ. ಕಳೆದ 3 ವರ್ಷಗಳಿಂದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನಗಳಿಸಿ ವಿಶಿಷ್ಠ ಸಾಧನೆ ಮಾಡಿದೆ. ಮೂಡಲಗಿ ವಲಯದಲ್ಲಿ 38 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದು ಒಂದು ದಾಖಲೆಯೆ ಸರಿ ಎಂದು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಸುಧಾರಣೆಯಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಗರ ಪ್ರದೇಶಗಳಿಗಿಂತ ಕಡಿಮೆ ಇಲ್ಲ ಎನ್ನುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಶಿಕ್ಷಣ ಸುಧಾರಣೆಯಾಗುತ್ತಿದೆ. ಮುಂದೆಯೂ ಕೂಡ ವಲಯ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಉಳಿಸಿಕೊಂಡು ಹೋಗಲು ಎಲ್ಲ ಶಿಕ್ಷಕರು ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ರೂಪುಗೊಳಿಸುವ ಹೊಣೆಗಾರಿಕೆ ಶಿಕ್ಷಕರಲ್ಲಿದೆ ಎಂದು ತಿಳಿಸಿದರು.
ಕಳೆದ 2004 ರಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ವಲಯದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಡಾ.ಎಸ್.ರಾಧಾಕೃಷ್ಣನ್ ಅವರ ಜೀವನ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಶಿಕ್ಷಣದ ಸಾರ ಹಾಗೂ ಮಹತ್ವವನ್ನು ತಿಳಿಸಿ ಹೇಳಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಹೇಳಿದರು.
ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣ ರಂಗಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದೇನೆ. ಶಿಕ್ಷಣಕ್ಕೆ ನೀಡಿದಷ್ಟು ಮಹತ್ವ ಬೇರೆ ಯಾವುದಕ್ಕೂ ನೀಡಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ತಪಸಿ, ಅರಳಿಮಟ್ಟಿ, ಹಡಗಿನಾಳ ಹಾಗೂ ಮುನ್ಯಾಳ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸುವುದಾಗಿ ಭರವಸೆಯಿತ್ತರು.
ಮೂಡಲಗಿ ವಲಯದ ಶಿಕ್ಷಣದ ಅಭಿವೃದ್ಧಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಅವರ ಪಾತ್ರ ದೊಡ್ಡದಿದೆ. ಇಲಾಖೆಯ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮನ್ನಿಕೇರಿ ಅವರ ಸೇವೆಯನ್ನು ನಮ್ಮ ವಲಯ ಇಂದಿನಿಂದ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಗಳಿಸಿರುವ ಮನ್ನಿಕೇರಿ ಅವರೀಗ ಬೇರೆಡೆ ವರ್ಗವಾಗಿ ಹೋಗುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಬಸವರಾಜ ಪುಠಾಣಿ ಹಾಗೂ ಮನ್ನಿಕೇರಿ ಅವರ ಸೇವೆಯನ್ನು ಗುರುತಿಸಿ ಅವರನ್ನು ಸತ್ಕರಿಸಿದ್ದೇನೆ. ಇವರಿಬ್ಬರೂ ದಕ್ಷತೆಯಿಂದ ಸೇವೆ ಸಲ್ಲಿಸಿ ಆಯಾ ಇಲಾಖೆಗಳ ಗೌರವವನ್ನು ಹೆಚ್ಚಿಸಿದ್ದಾರೆಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಹುಣಶ್ಯಾಳ ಪಿಜಿ ಗ್ರಾಮದ ನಿಜಗುಣ ದೇವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೇವಾ ನಿವೃತ್ತಗೊಂಡ ಶಿಕ್ಷಕರನ್ನು ಸತ್ಕರಿಸಿದರು. ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು, ಎಸ್ಎಸ್ಎಲ್ಸಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು, ಭೂ-ದಾನಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾದಳ, ಎನ್ಟಿಎಸ್ಇ ರಾಷ್ಟ್ರ ಹಂತ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿವಿಧ ಪ್ರತಿಷ್ಠಾನಗಳಿಂದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಲ್ಲೋಳಿ ಪಟ್ಟಣ ಪಂಚಾಯತ ಅಧ್ಯಕ್ಷೆ ಕಸ್ತೂರಿ ಕುರಬೇಟ, ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಶಿ. ಪಾಟೀಲ, ಜೆಜಿ ಕೋ ಆಸ್ಪತ್ರೆಯ ಅಧ್ಯಕ್ಷ ಬಸಗೌಡ ಪಾಟೀಲ(ನಾಗನೂರ), ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ಶಕುಂತಲಾ ಪರುಶೆಟ್ಟಿ, ಕಸ್ತೂರಿ ಕಮತಿ, ವಾಸಂತಿ ತೇರದಾಳ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಕ, ಚಿಕ್ಕೋಡಿ ಡಿಡಿಪಿಐ ರಾಜೀವ ನಾಯಕ, ಮೂಡಲಗಿ ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ನಾಗನೂರ ಪಪಂ ಅಧ್ಯಕ್ಷೆ ಶೋಭಾ ಬಬಲಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಸಹಕಾರಿ ಧುರೀಣ ಬಿ.ಬಿ. ಬೆಳಕೂಡ, ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಘ.ಯೋ.ನೀ.ಬ.ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುಖಂಡರಾದ ಮಹಾಂತೇಶ ಕಪ್ಪಲಗುದ್ದಿ, ನೀಲಕಂಠ ಕಪ್ಪಲಗುದ್ದಿ, ರಾವಸಾಹೇಬ ಬೆಳಕೂಡ, ಬಸವಂತ ದಾಸನವರ, ಮಲ್ಲಪ್ಪ ಹೆಬ್ಬಾಳ, ಭೀಮರಾಯಪ್ಪ ಕಡಾಡಿ, ಅಶೋಕ ಮಕ್ಕಳಗೇರಿ, ಕಲ್ಲೋಳಿ ಪಪಂ ಉಪಾಧ್ಯಕ್ಷೆ ಕಾಶವ್ವ ಸೊಂಟನವರ, ಸದಸ್ಯರುಗಳು, ತಹಶೀಲ್ದಾರ ಗಂಗಾಧರ ಮಳಗಿ, ತಾಪಂ ಇಓ ಎಫ್.ಜಿ.ಚಿನ್ನನ್ನವರ, ನಿಯೋಜಿತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.