ಗೋಕಾಕ:ಪ್ರತಿಯೊಬ್ಬರು ಪ್ರತಿನಿತ್ಯ ಶ್ರಮಪಟ್ಟು ಉತ್ತಮವಾದ ಸಾಧನೆಗೈದು ದೇಶದ ಒಳ್ಳೆಯ ನಾಗರಿಕರಾಗಬೇಕು : ಮೇಜರ್ ಸಿದ್ದಲಿಂಗಯ್ಯ
ಪ್ರತಿಯೊಬ್ಬರು ಪ್ರತಿನಿತ್ಯ ಶ್ರಮಪಟ್ಟು ಉತ್ತಮವಾದ ಸಾಧನೆಗೈದು ದೇಶದ ಒಳ್ಳೆಯ ನಾಗರಿಕರಾಗಬೇಕು : ಮೇಜರ್ ಸಿದ್ದಲಿಂಗಯ್ಯ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 5 :
ಪ್ರತಿಯೊಬ್ಬರು ಪ್ರತಿನಿತ್ಯ ಶ್ರಮಪಟ್ಟು ಉತ್ತಮವಾದ ಸಾಧನೆಗೈದು ದೇಶದ ಒಳ್ಳೆಯ ನಾಗರಿಕರಾಗಬೇಕು. ಓದು ಭವಿಷ್ಯ ರೂಪಿಸಿಕೊಳ್ಳಲು ಶಕ್ತಿ ನೀಡುತ್ತದೆ. ಮಗುವಿಗೆ ಓದು ಮಹತ್ವ ಪೂರ್ಣವಾಗಿದೆ ಎಂದು ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಗೆ ಶನಿವಾರ ಜ.4ರಂದು ಅನಿರೀಕ್ಷಿತ ಭೇಟಿ ನೀಡಿ, ಪ್ರೌಢ ಶಾಲೆಯ ಸಮಗ್ರ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದ ಬಳಿಕ ಶಾಲೆಯ ವಿದ್ಯಾರ್ಥಿಗಳನ್ನೊದ್ಧೇಶಿಸಿ ಮಾತನಾಡಿದ ಅವರು, ಪ್ರಾಣಿಕತೆ, ಬದ್ಧತೆ, ಶಿಸ್ತು, ನಾಯಕತ್ವದ ಒಳ್ಳೆಯ ಗುಣಗಳನ್ನು ಬೆಳಸಿಕೊಳ್ಳುವ ಮನೋಭಾವ ಮಕ್ಕಳಲ್ಲಿ ಬರಬೇಕು ಎಂದರು.
ರಾಜ್ಯದ ಎಲ್ಲ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳು ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯಂತೆ ಮಾದರಿ ಶಾಲೆಗಳಾಗಬೇಕು. ಶಿಕ್ಷಕರು ಮಗುವಿನ ಭವಿಷ್ಯದ ಹಣೆಬರಹ ಬರೆಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ದೇವರೆಂದು ತಿಳಿದುಕೊಳ್ಳಿ, ಮಕ್ಕಳ ಜೀವನ ರೂಪಿಸುವಂತಹ ಶಕ್ತಿ ಶಿಕ್ಷಕರಿಗೆ ಇದೆ. ಶಾಲಾ ಮಕ್ಕಳು ಹೆಚ್ಚು ಕಾಲ ಓದುವುದರಿಂದ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಗೋಕಾಕ ಶೈಕ್ಷಣಿಕ ವಲಯದ ಬಿಇಒ ಜಿ.ಬಿ.ಬಳಿಗಾರ, ಮೂಡಲಗಿ ಶೈಕ್ಷಣಿಕ ವಲಯದ ಬಿಇಒ ಅಜೀತ ಮನ್ನಿಕೇರಿ ಅವರು ಮಾತನಾಡಿ, ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯ ಸಮಗ್ರ ಪ್ರಗತಿ ಸೇರಿದಂತೆ ಗೋಕಾಕ-ಮೂಡಲಗಿ ವಲಯ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೈಕ್ಷಣಿಕ ಪ್ರಗತಿ, ಎಸ್ಸೆಸ್ಸೆಲ್ಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಲವಾರು ವಿನೂತನ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಉನ್ನತ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರತರಾದ ವಿದ್ಯಾರ್ಥಿಗಳ ಬದುಕು-ಬರಹಗಳ ಕುರಿತು ತಿಳಿಸಿದರು.
ಕೆಎಎಸ್ ಅಧಿಕಾರಿ ಅನುರಾಧಾ ಹಿರೇಮಠ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ತಮ್ಮ ಬದುಕಿನ ಓದು-ಬರಹಗಳ ಹಲವಾರು ವಿಶೇಷ ಸಂಗತಿಗಳ ಕುರಿತು ಮಾತನಾಡಿದರು. ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಲವಾರು ವಿಷಯಗಳ ಕುರಿತು ಕೆಲ ಕಾಲ ಸಂವಾದ ನಡೆಸಿದರು. ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮತ್ತು ಕುಟುಂಬದವರನ್ನು ಇಲ್ಲಿಯ ಪ್ರೌಢ ಶಾಲೆಯ ಪರವಾಗಿ ಸತ್ಕರಿಸಲಾಯಿತು. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಪ್ರಗತಿಗೆ ಮೆಚ್ಚುಗೆ ಮತ್ತು ಖುಷಿ ವ್ಯಕ್ತಪಡಿಸಿದರು. ಈ ವೇಳೆ ಮೇಜರ್ ಸಿದ್ದಲಿಂಗಯ್ಯ ಸಮ್ಮುಖದಲ್ಲಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಶೇ.90% ರಷ್ಟು ಫಲಿತಾಂಶಗೈಯುವ ವಾಗ್ಧಾನ ಮಾಡುವ ವಿಶೇಷ ಪೋಟೊ ಕಾರ್ಯಕ್ರಮ ಜರುಗಿತು.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ, ರವಿ ಹೊಳ್ಳಿಕೇರಿ, ಈರಯ್ಯ ಹಿರೇಮಠ, ಎಮ್.ಐ.ನೀಲಣ್ಣವರ, ಶಾಲೆಯ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.