ಬೆಳಗಾವಿ:ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು
ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ ಅ 1: ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾದ ನಾಡಧ್ವಜದ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಹಾಗೂ ಕನ್ನಡಿಗರು, ಕರ್ನಾಟಕ ಸರ್ಕಾರದ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ಪ್ರಕಟಿಸಿದ ಎಂಇಎಸ್ ಕಾರ್ಯಕರ್ತ ಸೂರಜ್ ಕಣಬರಕರ ವಿರುದ್ಧ ಕಲಂ 153 (ಎ) ಐಪಿಸಿ ಮತ್ತು ೬೬ ಐಟಿ ಕಾಯ್ದೆಯಡಿ ಮಂಗಳವಾರ ಸಂಜೆ ಬೆಳಗಾವಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ ಪರ ಹೋರಾಟಗಾರ ದೀಪಕ ಗುಡಗನಟ್ಟಿ ಅವರು ಸೂರಜ್ ಕಣಬರಕರ ವಿರುದ್ಧ ದೂರು ನೀಡಿದ್ದು, ಆರೋಪಿಯು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾದ ನಾಡಧ್ವಜದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾನೆ. ಅಲ್ಲದೇ, ತನ್ನ ಫೇಸ್ಬುಕ್ ಖಾತೆಯಲ್ಲಿ ಕನ್ನಡ ಧ್ವಜದ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವ್ಯಂಗ್ಯ ಚಿತ್ರ ಪ್ರಕಟಿಸುವ ಮೂಲಕ ಗಡಿಭಾಗದಲ್ಲಿ ಕನ್ನಡ-ಮರಾಠಿ ಉಭಯ ಭಾಷಿಕರ ನಡುವೆ ದ್ವೇಷದ ಭಾವನೆ ಮೂಡಿಸಲಾಗಿದೆ
ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಹೇಳಿಕೆ ನೀಡಿ ಕನ್ನಡಿಗರ ಭಾವನೆಗಳನ್ನು ಕೆರಳಿಸುವಂತೆ ಮಾಡಿದ್ದಾನೆ ಎಂದು ದೂರಿದ್ದಾರೆ. ‘ಬೆಳಗಾವಿ ಪ್ರಾದೇಶಿಕ ಕಚೇರಿ ನಾಡಧ್ವಜಕ್ಕೆ ಕುತ್ತು?’ ತಲೆಬರಹದೊಂದಿಗೆ ಎಂಇಎಸ್ ಕಾರ್ಯಕರ್ತನ ಪುಂಡಾಟವನ್ನು ಅ.1ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು. ಕನ್ನಡಪರ ಸಂಘಟನೆಗಳ ಆಕ್ರೋಶ: ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತ ಸೂರಜ್ ಕಣಬರಕರ ಕನ್ನಡ ವಿರೋಧಿ ನಿಲುವಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಗಡಿಭಾಗದಲ್ಲಿ ಪದೆ ಪದೆ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವ ಈತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.
ಎಂಇಎಸ್ ಕಾರ್ಯಕರ್ತ ಸೂರಜ್ ಕಣಬರಕರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕನ್ನಡ ಹೋರಾಟಗಾರ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕನ್ನಡ ಹೋರಾಟಗಾರರು ಬೆಳಗಾವಿ ನಗರ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ. ನಾಡಧ್ವಜ ತೆರವುಗೊಳಿಸಬೇಡಿ: ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ರಾಷ್ಟ್ರಧ್ವಜಕ್ಕೆ ಅಗೌರವ ತೋರದಂತೆ ನಾಡಧ್ವಜವನ್ನು ಹಾರಿಸಲಾಗಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ನಾಡಧ್ವಜವನ್ನು ತೆರವುಗೊಳಿಸುವಂತೆ ಕೇಂದ್ರದ ಅಧೀನ ಕಾರ್ಯದರ್ಶಿ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದೆ.
ಯಾವುದೇ ಕಾರಣಕ್ಕೂ ನಾಡಧ್ವಜ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಟಿ.ಜಿ.ಕೃಷ್ಣಭಟ್, ಪೊಲೀಸ್ ಆಯುಕ್ತರು ತಿಳಿಸಿದ್ದಾರೆ
D