ಗೋಕಾಕ:ಗೋಕಾಕ ಮತಕ್ಷೇತ್ರದ ಅಭಿವೃದ್ಧಿಯೊಂದೇ ನಮ್ಮ ಗುರಿ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ

ಗೋಕಾಕ ಮತಕ್ಷೇತ್ರದ ಅಭಿವೃದ್ಧಿಯೊಂದೇ ನಮ್ಮ ಗುರಿ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ
ಅನರ್ಹ ಪಟ್ಟದಿಂದ ಕಾಂಗ್ರೇಸ್ಸಿಗರಿಗೆ ಪಾಠಕಲಿಸಲು ಅರ್ಹರನ್ನಾಗಿ ಮಾಡಿ ಗೆಲ್ಲಿಸಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 25 :
ಕಳೆದ 20 ವರ್ಷಗಳಿಂದ ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಿದ್ದೇನೆ. ನೂರಾರು ಕೋಟಿ ರೂ.ವೆಚ್ಚದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಹಾಗೂ ಜಾತಿ ಬೇಧ ಮಾಡಿಲ್ಲ. ಎಲ್ಲರನ್ನು ಸಮಾನತೆಯಿಂದ ಕಂಡು ಸರ್ವಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವುದಾಗಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ತವಗ, ಕೈತನಾಳ, ಕೈಹೊಸೂರ, ಗಡಾ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಅಭಿವೃದ್ಧಿಯೊಂದೇ ನನ್ನ ಮುಂದಿರುವ ಗುರಿಯಾಗಿದೆ ಎಂದು ಹೇಳಿದರು.
ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಸೇವಕನಾಗಿ ದುಡಿದಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದರೂ ಅಧಿಕಾರ ಬೇರೊಬ್ಬರು ನಡೆಸುತ್ತಿದ್ದರು. ಹೆಸರಿಗೆ ಮಾತ್ರ ಮಂತ್ರಿಯಾಗಿದ್ದೆ. ಯಾವೊಂದು ನಾನು ಹೇಳಿದ ಕಾರ್ಯಗಳು ನಡೆಯಲಿಲ್ಲ. ಅಭಿವೃದ್ಧಿ ಕಾರ್ಯಗಳಂತೂ ಕನಸಿನ ಮಾತಾಗಿತ್ತು. ಕಾಂಗ್ರೇಸ್ ನಾಯಕರುಗಳ ದುರಹಂಕಾರ ಮಿತಿ ಮೀರಿದ್ದರಿಂದ ನಾನು ಸಚಿವ ಸ್ಥಾನಕ್ಕೆ ಜೊತೆಗೆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಗೆ ಬಂದೆ. ಎಂದಿಗೂ ಅಧಿಕಾರದ ಹಿಂದೆ ಜೋತು ಬೀಳಲಿಲ್ಲ. ಅಧಿಕಾರ ಶಾಶ್ವತವಲ್ಲ. ಜನರ ಪ್ರೀತಿ ವಿಶ್ವಾಸ ಮುಖ್ಯ. ಹೀಗಾಗಿ ಗೋಕಾಕ ಮತ ಕ್ಷೇತ್ರದ ವಿಕಾಸಕ್ಕಾಗಿ ಬಿಜೆಪಿಗೆ ಸೇರಿದ್ದೇನೆ. ದೇಶದಲ್ಲಿ ಬಿಜೆಪಿ ಬಿಟ್ಟರೆ ಯಾವ ಪಕ್ಷಗಳಿಗೂ ಭವಿಷ್ಯವಿಲ್ಲ ಎಂದು ಹೇಳಿದರು.
ಕಾನೂನು ಬಾಹೀರವಾಗಿ ಆಗಿನ ಸ್ಪೀಕರ್ ರಮೇಶ ಕುಮಾರ ಅವರು ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಸಂವಿಧಾನಕ್ಕೆ ಅಪಚಾರ ಬಗೆದರು.ಅವರು ಸ್ಪೀಕರರಾಗಿ ಕೆಲಸ ಮಾಡದೇ ಸಿದ್ಧರಾಮಯ್ಯಾನವರ ಏಜಂಟರಂತೆ ಕೆಲಸ ಮಾಡಿದರೆಂದು ಆರೋಪಿಸಿದರು.
ಡಿ.5ರಂದು ನಡೆಯುವ ಉಪ ಚುನಾವಣೆಯಲ್ಲಿ ಕಮಲ ಚಿನ್ನೆಗೆ ಮತ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಕೋರಿದರು.
ಬಿಜೆಪಿ ಪದಾಧಿಕಾರಿಗಳು, ಪಕ್ಷದ ಮುಖಂಡರು, ಸಹಕಾರಿ ಧುರೀಣರು ಉಪಸ್ಥಿತರಿದ್ದರು.
ನಂತರ ರಮೇಶ ಜಾರಕಿಹೊಳಿ ಅವರು ಪಂಚಾನಟ್ಟಿ, ದಾವಲತ್ತಿ, ಅಕ್ಕತಂಗೇರಹಾಳ, ಡುಂಉರಬನಟ್ಟಿ, ಅಂಕಲಗಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.