ಗೋಕಾಕ:ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರಮೇಶ ಜಾರಕಿಹೊಳಿ ಬೆಂಬಲಿತ ತಾ.ಪಂ ಸದಸ್ಯರು

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರಮೇಶ ಜಾರಕಿಹೊಳಿ ಬೆಂಬಲಿತ ತಾ.ಪಂ ಸದಸ್ಯರು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 30 :
ಗೋಕಾಕ ಉಪಚುನಾವಣೆಗೆ ಭರ್ಜರಿಯಾಗಿ ಸಜ್ಜಾಗುತ್ತಿರುವ ಗೋಕಾಕ್ ಕಾಂಗ್ರೆಸ್ ಪಕ್ಷಕ್ಕೆ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸೇರಿ 23 ಸದಸ್ಯರು ರಾಜಿನಾಮೆ ನೀಡುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರಾಗಿರುವ 23 ತಾಲೂಕು ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಬುಧವಾರದಂದು ಮಧ್ಯಾಹ್ನ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಗೋಕಾಕ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ಗೆ ಕೈ ಕೊಟ್ಟಿದ್ದಾರೆ.
23 ತಾಲೂಕು ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಮ್ಮದೆಯಾದ 23 ಸದಸ್ಯರ ಬಣಹೊಂದಿದ್ದು ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಗೊಳಿಸುವದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು 42 ಸದಸ್ಯ ಬಲದ ಗೋಕಾಕ್ ತಾಲೂಕು ಪಂಚಾಯತಿಯ 23 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಗೋಕಾಕ ವಿಧಾನಸಭಾ ಮತಕ್ಷೇತ್ರದ 18 ಹಾಗೂ ಅರಭಾಂವಿ ವಿಧಾನಸಭಾ ಮತಕ್ಷೇತ್ರದ 5 ಕಾಂಗ್ರೇಸ್ ಪಕ್ಷದ ತಾಪಂ ಸದಸ್ಯರು ರಾಜಿನಾಮೆ ನೀಡಿದ್ದಾರೆ. ಕಾಂಗ್ರೇಸ್ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಅಂಚೆಯ ಮೂಲಕ ರಾಜಿನಾಮೆ ರವಾನೆ ಮಾಡಿದ್ದಾರೆ.
ಗೋಕಾಕ ವಿಧಾನಸಭಾ ಮತಕ್ಷೇತ್ರದ ಅಂಕಲಗಿ ತಾಪಂ ಕ್ಷೇತ್ರದ ಸುನಂದಾ ಬಸವರಾಜ ಕರದೇಸಾಯಿ, ಹೀರೆನಂದಿ ತಾಪಂ ಕ್ಷೇತ್ರದ ಯಲ್ಲಪ್ಪ ಭೀಮಪ್ಪಾ ನಾಯಿಕ, ಅಕ್ಕತಂಗೇರಹಾಳ ತಾಪಂ ಕ್ಷೇತ್ರದ ಸಿದ್ದಪ್ಪಾ ಶಿವಪ್ಪಾ ಸನ್ನನಾಯಕ, ಖನಗಾಂವ ತಾಪಂ ಕ್ಷೇತ್ರದ ಶಿವಕ್ಕಾ ಮುದಕಪ್ಪ ಪೂಜೇರಿ, ಕೊಣ್ಣೂರ ಗ್ರಾಮೀಣ ತಾಪಂ ಕ್ಷೇತ್ರದ ಸುವರ್ಣಾ ಬಾಳನಾಯ್ಕ ನಾಯಕ, ಮಕ್ಕಳಗೇರಿ ತಾಪಂ ಕ್ಷೇತ್ರದ ಭರಮಪ್ಪ ಕರೆಪ್ಪ ಮುತ್ತೆನ್ನವರ, ಮಾಲದಿನ್ನಿ ತಾಪಂ ಕ್ಷೇತ್ರದ ರಂಗವ್ವ ಯಲ್ಲಪ್ಪ ಗೂದಿಗೊಪ್ಪ, ಮಮದಾಪೂರ ತಾಪಂ ಕ್ಷೇತ್ರದ ಸಿದ್ದಪ್ಪ ಮಹಾದೇವ ಕಮತ, ಸುಲಧಾಳ ತಾಪಂ ಕ್ಷೇತ್ರದ ನಿರ್ಮಲಾ ಬಡ್ಲಮಗೊಳ, ತವಗ ತಾಪಂ ಕ್ಷೇತ್ರದ ಶಿವಾನಂದ ಸಿದ್ದಲಿಂಗಯ್ಯ ತವಗಮಠ, ಕೊಳವಿ ತಾಪಂ ಕ್ಷೇತ್ರದ ಮಹಾನಂದ ಕರೆಪ್ಪ ಬಡಿಗವಾಡ, ಮದವಾಲ ತಾಪಂ ಕ್ಷೇತ್ರದ ಸೀಮಾ ಸುರೇಶ ದಳವಾಯಿ, ಬೆನಚಿಣಮರ್ಡಿ ತಾಪಂ ಕ್ಷೇತ್ರದ ಮಹಾದೇವಿ ಲಕ್ಷ್ಮಣ ತುರಾಯಿ, ಧುಪದಾಳ ತಾಪಂ ಕ್ಷೇತ್ರದ ಲಗಮಣ್ಣ ದೇವಪ್ಪ ನಾಗನ್ನವರ, ನಂದಗಾಂವ ತಾಪಂ ಕ್ಷೇತ್ರದ ಚಿದಾನಂದ ಬಸವರಾಜ ಶಿರಗಾವಿ, ಶಿಂಧಿಕುರಬೇಟ ತಾಪಂ ಕ್ಷೇತ್ರದ ನಿಂಗಪ್ಪ ಕಾಡಪ್ಪ ಬಬಲಾಡಿ, ಶಿಂಗಳಾಪೂರ ತಾಪಂ ಕ್ಷೇತ್ರದ ಕೆಂಚಪ್ಪ ಅಜ್ಜಪ್ಪ ಬೆಣಚಿನಮರಡಿ, ಶಿವಾಪೂರ (ಹ) ಶಿವಬಸು ಯಮನಪ್ಪ ಝಂಜರವಾಡ.
ಅರಭಾಂವಿ ವಿಧಾನಸಭಾ ಕ್ಷೇತ್ರದ ಕೆಮ್ಮನಕೂಲ ತಾಪಂ ಕ್ಷೇತ್ರದ ನೀಲವ್ವ ಶಿವಲಿಂಗ ಬಳಿಗಾರ, ಉದಗಟ್ಟಿ ತಾಪಂ ಕ್ಷೇತ್ರದ ಶೋಭಾ ಅಶೋಕ ಕಲ್ಲೋಳಿ, ಮೆಳವಂಕಿ ತಾಪಂ ಕ್ಷೇತ್ರದ ಬಾಳವ್ವ ಸತ್ತೆಪ್ಪ ಬಬಲೆಪ್ಪನವರ, ಬೆಟಗೇರಿ ತಾಪಂ ಕ್ಷೇತ್ರದ ಲಕ್ಷ್ಮಣ ನೀಲನ್ನವರ, ಸುಣಧೋಳಿ ತಾಪಂ ಕ್ಷೇತ್ರದ ರಮೇಶ ಈಶ್ವರ ಗಡಗಿ ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದವರು.