ಗೋಕಾಕ ತಾಲೂಕಿನಿಂದಲೇ ಎಲ್ಲ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವಾಗಲಿ :: ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ
ಗೋಕಾಕ ತಾಲೂಕಿನಿಂದಲೇ ಎಲ್ಲ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವಾಗಲಿ :: ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ
ಗೋಕಾಕ : 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಆಧಾರದಲ್ಲಿ ಗೋಕಾಕ ತಾಲೂಕಿನಲ್ಲಿ ಸಮಾನತೆ ಜಾರಿಗೆ ಬರುತ್ತಿರುವುದು ಶ್ಲಾಘನೀಯವೆಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರದಂದು ಸ್ಥಳೀಯ ಶೂನ್ಯ ಸಂಪಾದನ ಮಠ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಗೋಕಾಕ ತಾಲೂಕಾ ಮಟ್ಟದ ಬಸವ ಜಯಂತಿ ಉತ್ಸವ ಹಾಗೂ ಬೃಹತ್ ಶೋಭಾ ಯಾತ್ರೆಯ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬಸವಣ್ಣನವರು ಸಾಮಾಜಿಕ ನ್ಯಾಯದಡಿ ಎಲ್ಲರನ್ನು ಒಗ್ಗೂಡಿಸಿದಾರೆ ಇಂದು ಗೋಕಾಕಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆ ಪವಿತ್ರ ಕಾರ್ಯಕ್ಕೆ ಕೈ ಹಾಕಿ ಯಶ ಸಾಧಿಸಿದಾರೆ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗಿ ಸರ್ಮಥ ಸಮಾಜ ನಿರ್ಮಿಸಲು ಮುಂದಾಗಬೇಕಾಗಿದೆ ಆ ದೀಸೆಯಲ್ಲಿ ಎಲ್ಲರು ಕಾರ್ಯಪ್ರವೃತರಾಗಬೇಕೆಂದು ಹೇಳಿದರು.
ಗೋಕಾಕ ತಾಲೂಕಿನಿಂದಲೇ ಎಲ್ಲ ವರ್ಗಗಳನ್ನು ಒಂದುಗೂಡಿಸುವ ಕಾರ್ಯವಾಗಬೇಕು. ಇದಕ್ಕಾಗಿ ಸಂಪಾದನ ಮಠದ ಮುರುಘೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಾಮಾಜಿಕ ಪರಿವರ್ತನೆಯಲ್ಲಿ ಮಠಾಧೀಶರ ಮಾರ್ಗದರ್ಶನ ಅಗತ್ಯವಾಗಿದೆ. ಶಾಂತಿ ಸಹನೆಗೆ ಹೆಸರಾಗಿರುವ ಗೋಕಾಕ ತಾಲೂಕಿನ ಸರ್ವ ಜನಾಂಗದ ಒಗ್ಗಟ್ಟು ಈ ನಾಡಿಗೆ ಹಾಗೂ ಈ ದೇಶಕ್ಕೆ ತಿಳಿಯಬೇಕಾಗಿದೆ. ಅದಕ್ಕಾಗಿ ಮಠಾಧೀಶರು ಎಲ್ಲರನ್ನು ಒಂದುಗೂಡಿಸಿ ಜನರಲ್ಲಿ ಕೋಮು ಸಾಮರಸ್ಯ ಬೆಸೆಯುವ ಕಾರ್ಯಕ್ಕೆ ಮುಂದಾಗಬೇಕೆಂದು ಕೋರಿದರು.
ಎಲ್ಲ ಮಹಾತ್ಮರು ಸಮಾನತೆಯ ಸಂದೇಶವನ್ನೇ ಜನತೆಗೆ ನೀಡಿದ್ದು ಈ ಶೋಭಾ ಯಾತ್ರೆಯಲ್ಲಿ ಎಲ್ಲ ಜನಾಂಗದವರು ಭಾಗವಹಿಸುವ ಮೂಲಕ ಬಸವಾದಿ ಶರಣರು ಹಾಗೂ ಮಹಾತ್ಮರು ಸಾರಿದ ಸಮಾನತೆಯ ಹಾದಿಯಲ್ಲಿ ಸಾಗುತ್ತಿರುವುದು ಮಾದರಿಯಾಗಿದೆ.
ಈ ಶೋಭಾಯಾತ್ರೆಯ ಯಶಸ್ಸಿಗೆ ಕಾರಣೀಕರ್ತರಾದ ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಇದೇ ಸಮಯದಲ್ಲಿ ಅಭಿನಂದಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಸವ ಜಯಂತಿಯು ಕೇವಲ ಒಂದು ಜನಾಂಗದ ಜಯಂತಿಯಾಗಬಾರದು ಎಲ್ಲ ಸಮಾಜದವರು ಶಾಂತಿ-ಸಹಬಾಳ್ವೆಯಿಂದ ಬದುಕಲಿಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ. ಇದು ರಾಜಕೀಯ ಪ್ರೇರಿತ ಉತ್ಸವ ಅಲ್ಲಾ ಎಲ್ಲರನ್ನು ಒಗ್ಗೂಡಿಸಿ ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಚಿಕ್ಕ ಪ್ರಯತ್ನ ಇದಾಗಿದೆ . ದಾರ್ಶನಿಕರ ಭಾವಚಿತ್ರಗಳನ್ನು ಹಾಕಿ ಅದ್ಧೂರಿಯಾಗಿ ಬಸವ ಜಯಂತಿ ಹಾಗೂ ಶೋಭಾ ಯಾತ್ರೆ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಐಕ್ಯತೆ ಬಿಂಬಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ಕೊಳವಿ ಹನುಮಂತ ದೇವರ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಗೆ ಸಣ್ಣ ಕೈಗಾರಿಕೆ ಹಾಗೂ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಶರಣರ ವಚನಗಳನ್ನು ಹೊತ್ತ ಸುಮಂಗಲೆಯರು, ವಿವಿಧ ವಾಧ್ಯ ಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ಜನರೊಂದಿಗೆ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾರೊಪಗೊಂಡಿತು .
ಈ ಶೋಭಾ ಯಾತ್ರೆಯಲ್ಲಿ ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಶಿವಲಿಂಗ ಮಹಾಸ್ವಾಮಿಗಳು, ಯಾದವಾಡದ ಬಸವಲಿಂಗ ಸ್ವಾಮಿಗಳು, ಚಿಪ್ಪಲಕಟ್ಟಿಯ ಕಲ್ಮೇಶ್ವರ ಮಹಾಸ್ವಾಮಿಗಳು, ಕಡಕೋಳದ ಬಸವಲಿಂಗ ಸ್ವಾಮಿಗಳು, ಘೋಡಗೇರಿಯ ಕಾಶಿನಾಥ ಸ್ವಾಮಿಗಳು, ಹೂಲಿಕಟ್ಟಿಯ ಕುಮಾರ ದೇವರು ಸೇರಿದಂತೆ ಹಲವಾರು ಪೂಜ್ಯರು, ಉತ್ಸವ ಸಮೀತಿ ಅಧ್ಯಕ್ಷ ನೀಲಕಂಠ ಕಪ್ಪಲಗುದ್ದಿ, ಮಲ್ಲಿಕಾರ್ಜುನ ಈಟಿ, ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಸಹಕಾರಿಗಳು, ಸರ್ವ ಸಮಾಜಗಳ ಮುಖಂಡರುಗಳು ಪಾಲ್ಗೊಂಡಿದ್ದರು