ಗೋಕಾಕ:ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕರವೇ ಆಗ್ರಹ
ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕರವೇ ಆಗ್ರಹ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮೇ 14 :
ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರದಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ತಹಶೀಲ್ದಾರ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿ ನಂತರ ಶಿಶು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮುಖಾಂತರ ಶಿಶು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಅರ್ಪಿಸಿದರು.
ಕಳೆದ ಏಳೆಂಟು ತಿಂಗಳ ಹಿಂದೆ ಗೋಕಾಕ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಯಾಗಿ ವರ್ಗವಾಗಿ ಬಂದಿರುವ ಅನೀಲಕುಮಾರ ಕಾಂಬಳೆ ಸಾಹೇಬರು ತಾನೊಬ್ಬ ಸರಕಾರಿ ಅಧಿಕಾರಿ ಎಂಬುವುದನ್ನು ಮರೆತು ಸರ್ವಾಧಿಕಾರಿ ಧೋರಣೆಯನ್ನು ತೋರಿ ಸಾರ್ವಜನಿಕರಿಗೆ ಮತ್ತು ಕೆಲ ಅಂಗನವಾಡಿ ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಕಾಂಬಳೆ ಸಾಹೇಬರು ಗೋಕಾಕಕ್ಕೆ ಬಂದಾಗಿನಿಂದ ಗೋಕಾಕ ನಗರದ 57 ಮತ್ತು ತಾಲೂಕಿನಾದ್ಯಂತ ಇರುವ ಒಟ್ಟು 216 ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳು ವಿತರಣೆಯಾಗುತ್ತಿಲ್ಲಾ. ಇದರಿಂದ ಈ ಅಂಗನವಾಡಿ ಕೇಂದ್ರಗಳನ್ನು ಅವಲಂಬಿಸಿರುವ ಗರ್ಭಿಣಿಯರು, ಬಾಣಂತಿಯರು, ಬಡಕೂಲಿ ಕಾರ್ಮಿಕ ಮಕ್ಕಳು ಸರಿಯಾಗಿ ಆಹಾರಧಾನ್ಯ, ಹಾಲು, ಮೊಟ್ಟೆಗಳನ್ನು ಪಡೆಯದೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇಲಾಖೆಯ ನಿಯಮದ ಪ್ರಕಾರ ಪ್ರತಿಯೊಂದು ಅಂಗನವಾಡಿ ಕೇಂದ್ರಕ್ಕೆ ಆ ಕೇಂದ್ರದಲ್ಲಿ ದಾಖಲಾದ ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರ ದಾಖಲಾತಿಯ ಪ್ರಕಾರ ಬೆಲ್ಲ, ಹೆಸರುಕಾಳು, ಸಕ್ಕರೆ, ಗೋಧಿ, ಹಾಲು, ಮೊಟ್ಟೆ ಮತ್ತು 6 ರಿಂದ 2 ವರ್ಷದ ಮಕ್ಕಳಿಗೆ ಪುಷ್ಟಿ ಪಾಕೆಟ್ (ನ್ಯೂಟ್ರಿಮ್ಯಾಕ್ಸ್) ನ್ನು ನೀಡಲೇಬೇಕು. ಆದರೆ ಈ ಯಾವ ನಿಯಮಗಳು ಗೋಕಾಕ ತಾಲೂಕಿನಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಖೇದಕರವಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಹಾಜರಾತಿ ಅನುಗುಣವಾಗಿ ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರು ಕೇಂದ್ರಕ್ಕೆ ಬರದಿದ್ದರೂ ಸಹ ಅವರ ಹಾಜರಾತಿ ಹಾಕಿ ಆಹಾರಧಾನ್ಯ ಮತ್ತು ಮೊಟ್ಟೆಗಳನ್ನು ಪಡೆದು ಬೇರೆ ಕಡೆಗಳಲ್ಲಿ ನೀಡಲಾಗುತ್ತಿದೆ. ನಿಯಮದ ಪ್ರಕಾರ ವಾರದ 2 ದಿನಗಳಲ್ಲಿ ಮಕ್ಕಳಿಗೆ ಮತ್ತು ವಾರದ ಎಲ್ಲಾ ದಿನಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ಹಾಜರಾತಿಯ ಅನುಗುಣವಾಗಿ ಮೊಟ್ಟೆಗಳನ್ನು ನೀಡಲೇಬೇಕು. ಆದರೆ ಹಾಜರಾತಿ ಕಡಿಮೆ ಇದ್ದರೂ ಸಹ ಇಲಾಖೆಗೆ ನೀಡಿದ ಹಾಜರಾತಿ ಅನುಗುಣವಾಗಿ ಮೊಟ್ಟೆಗಳಿಗೆ ಹಣ ಪಡೆಯುತ್ತಾರೆ. ಆದರೆ ವಿತರಣೆ ಮಾತ್ರ ಸರಿಯಾಗಿ ಆಗುವುದಿಲ್ಲ. ಕೆಲವೊಂದು ಕೇಂದ್ರಗಳಲ್ಲಿ ಅರ್ಧ ಮೊಟ್ಟೆಗಳನ್ನು ವಿತರಿಸುವ ನಿದರ್ಶನಗಳು ಗೋಕಾಕ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ನೋಡ ಸಿಗುತ್ತವೆ.
ಇವೆಲ್ಲಾ ಗೊಂದಲಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ಶಿಶು ಅಭಿವೃದ್ಧಿ ಅಧಿಕಾರಿ ಕಾಂಬಳೆ ಸಾಹೇಬರು ಮಾತ್ರ ಇದು ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸಿ ತಮ್ಮ ಬೇಜವ್ದಾರಿಯನ್ನು ತೋರುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸುಧಾರಿಸುವ ಬದಲು ಪ್ರತಿಯೊಂದು ಅಂಗನವಾಡಿ ಕೇಂದ್ರದಿಂದ ಪ್ರತಿ ತಿಂಗಳು ವಂತಿಕೆ ಸಂಗ್ರಹಣೆ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಈ ಕೇಂದ್ರಗಳನ್ನು ಅವಲಂಬಿಸಿರುವ ಬಡಮಕ್ಕಳಿಗೆ ಮೋಸ ವೆಸಗುತ್ತಿದ್ದಾರೆ.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೋಕಾಕ ಶಿಶು ಅಭಿವೃದ್ಧಿ ಅಧಿಕಾರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ನಗರ ಹಾಗೂ ತಾಲೂಕಿನಾದ್ಯಂತವಿರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರಧಾನ್ಯಗಳನ್ನು ನೋಡಿಕೊಳ್ಳಬೇಕೆಂದು ಕರವೇ ವಿನಂತಿಸುತ್ತದೆ. ಇದಕ್ಕೆ ತಪ್ಪಿದ್ದಲ್ಲಿ ಬೆಳಗಾವಿಯ ಉಪನಿರ್ದೇಶಕರ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಈ ಮನವಿಯ ಮುಖೇನ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾಧಿಕ್ ಹಲ್ಯಾಳ, ದೀಪಕ್ ಹಂಜಿ, ಹನೀಪಸಾಬ ಸನದಿ, ರಮೇಶ ಕಮತಿ, ರೆಹಮಾನ ಮೊಕಾಶಿ, ನಿಜಾಮ ನದಾಫ್, ಸುರೇಶ ಪತ್ತಾರ, ಮಲ್ಲು ಸಂಪಗಾರ, ನಿಯಾಜ್ ಪಟೇಲ್, ಮಹಾದೇವ ಮಕ್ಕಳಗೇರ, ದುರ್ಗಪ್ಪ ಗಾಡಿವಡ್ಡರ, ಬಸು ಹುಲಕುಂದ, ರಾಜೇಶ್ವರಿ ವಡೇರ, ಶೆಟ್ಟೆಪ್ಪ ಗಾಡಿವಡ್ಡರ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಬಸು ಗಾಡಿವಡ್ಡರ, ಅಮೀರಖಾನ ಜಗದಾಳೆ, ಚನ್ನಪ್ಪ ಬಂಡಿವಡ್ಡರ, ಶಿವಾನಂದ ತಹಶೀಲ್ದಾರ, ಶಿವಾನಂದ ಬಂಡಿವಡ್ಡರ, ಅಜಿತ್ ಮಲ್ಲಾಪೂರೆ, ಶಂಕರ ಬಂಡಿವಡ್ಡರ, ಹನಮಂತ ಕಮತೆ, ಯಲ್ಲಪ್ಪ ಧರ್ಮಟ್ಟಿ, ಮಹಾಂತೇಶ ಮರಿಕಟ್ಟಿ, ಅಪ್ಪಯ್ಯ ತಿಗಡಿ, ವಿಠ್ಠಲ ಕಮತಿ, ಸಂತು ಕೋಲಕಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.