ಗೋಕಾಕ:ಕಮಲ ಸಂದೇಶ ಮೋಟರ್ ಬೈಕ್ ರ್ಯಾಲಿಗೆ ಚಾಲನೆ
ಕಮಲ ಸಂದೇಶ ಮೋಟರ್ ಬೈಕ್ ರ್ಯಾಲಿಗೆ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 2 :
ರಾಷ್ಟ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಜನತೆಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡುವ ಕಾತುರವಿದೆ. ಕೋಟ್ಯಾಂತರ ಜನರ ಹೃದಯದಲ್ಲಿ ಭದ್ರವಾಗಿ ನೆಲೆಸಿರುವ ನರೇಂದ್ರ ಮೋದಿ ಅವರ ಜನಪ್ರೀಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದು ಯುವ ಧುರೀಣ ನಾಗಪ್ಪ ಶೇಖರಗೋಳ ಹೇಳಿದರು.
ಶನಿವಾರದಂದು ಅರಭಾವಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಕಮಲ ಸಂದೇಶ ಮೋಟರ್ ಬೈಕ್ ರ್ಯಾಲಿಗೆ ಲೋಳಸೂರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರೀಕನು ಆರ್ಥಿಕವಾಗಿ ಬಲಾಢ್ಯವಾಗಲು ಎಲ್ಲ ವರ್ಗಗಳಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡ ಅವರು, ಬಿಜೆಪಿ ಶಕ್ತಿಶಾಲಿ ಪಕ್ಷವಾಗಲು ಕಾರ್ಯಕರ್ತರ ತ್ಯಾಗ ಪರಿಶ್ರಮವೇ ಕಾರಣವೆಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಯುವಮೋರ್ಚಾ ಅಧ್ಯಕ್ಷ ಬಸವರಾಜ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಬಿಜೆಪಿ ಸ್ಲಂ ಮೋರ್ಚಾ ಕಾರ್ಯದರ್ಶಿ ಮಹಾದೇವ ಶೆಕ್ಕಿ, ಯುವ ಮುಖಂಡರಾದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಲಕ್ಷ್ಮಣ ನಿಂಗನ್ನವರ, ಅಡಿವೆಪ್ಪ ಬಿಲಕುಂದಿ, ಬಸವರಾಜ ಮಾಳೇದವರ, ಬಸು ಹನಮಸಾಗರ, ನಜೀರ ಮಕಾನದಾರ, ಫೈ.ಶಿವು ಕುಡ್ಡೆಮ್ಮಿ, ವಸಂತ ರಾಣಪ್ಪಗೋಳ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಲೋಳಸೂರದಿಂದ ಆರಂಭಗೊಂಡ ಬೈಕ್ ರ್ಯಾಲಿ ಸಂಗನಕೇರಿ, ಕಲ್ಲೋಳಿ, ನಾಗನೂರ ಮಾರ್ಗವಾಗಿ ಮೂಡಲಗಿಗೆ ತೆರಳಿತು.