RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ 

ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ
ಗೋಕಾಕ ನ 23 : ಅರವಿಂದ ದಳವಾಯಿ ರಾಜಕೀಯ ಜೀವನದಲ್ಲಿ ಅನೇಕ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಅವರ ಹತಾಶ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕೌಜಲಗಿ ಗ್ರಾಮದ ಶ್ರೀ ವಿಠ್ಠಲ ಬೀರದೇವರ ದೇವಸ್ಥಾನದ ಟ್ರಸ್ಟ್ ಇಲ್ಲದೇ ಇದ್ದರೂ ಜಾತ್ರೆ ಪ್ರಾರಂಭದಿಂದಲೂ ಅದಕ್ಕೊಂದು ಆಡಳಿತ ಮಂಡಳಿ ಇರುತ್ತದೆ. ಅವರು ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಆ ರೀತಿ ಜಾತ್ರೆಯನ್ನು ನಡೆಸಲಾಗುವುದು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಮಾಜಿ ಸಚಿವ ದಿ. ವಸಂತರಾವ್ ಪಾಟೀಲ, ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ, ಮಾಜಿ ಸಂಸದ ಅಮರಸಿಂಹ ಪಾಟೀಲ, ಈ ಜಾತ್ರೆಗೆ ಕಮೀಟಿಯವರ ಮನವಿಗೆ ಓಗೊಟ್ಟು ಭೇಟಿ ನೀಡಿರುತ್ತಾರೆ. ಅರಭಾವಿ ಭಾಗದ ಜನಪ್ರಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅನೇಕ ಬಾರಿ ಜಾತ್ರೆಗೆ ಭೇಟಿ ನೀಡಿರುತ್ತಾರೆ. ಕಳೆದ 20 ವರ್ಷಗಳಿಂದ ಈ ಜಾತ್ರೆ ಪ್ರಾರಂಭವಾಗಿದ್ದು, ಚುನಾಯಿತ ಪ್ರತಿನಿಧಿಯಾದ ನಾನು ಎಲ್ಲಾ ಕಾರ್ಯಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಕಳೆದ 4 ವರ್ಷಗಳಿಂದ ಅರವಿಂದ ದಳವಾಯಿ ಜಾತ್ರೆಯ ಯಾವುದೇ ಕಾರ್ಯಕ್ಕೆ ಸ್ಪಂದಿಸದೇ ಇರುವದರಿಂದ, ಕಳೆದ 2 ವರ್ಷಗಳಿಂದ ಅವನ ಹೆಸರನ್ನು ಕಮೀಟಿಯವರು ಕೈಬಿಟ್ಟಿರುತ್ತಾರೆ. 20 ವರ್ಷಗಳಲ್ಲಿ ದೇವಸ್ಥಾನಕ್ಕೆ ಒಂದು ಬಾರಿ ಇಟ್ಟಿಗೆ, ಒಂದು ಬಾರಿ 10 ಚೀಲ ಗೋದಿಯನ್ನು ದೇವಸ್ಥಾನಕ್ಕೆ ನೀಡಿರುವುದನ್ನು ಬಿಟ್ಟರೆ ಅರವಿಂದ ದಳವಾಯಿ ಯಾವುದೇ ಸಹಾಯವನ್ನು ಜಾತ್ರೆಗೆ ಮಾಡಿರುವುದಿಲ್ಲ. ಈ ವರ್ಷ ಆಮಂತ್ರಣ ಪತ್ರಿಕೆ ಪ್ರಕಟವಾದ ಮೇಲೆ ನನ್ನ ಮೇಲೆ ಗೂಬೆ ಕೂಡ್ರಿಸುವ ಸಲುವಾಗಿ ಕಮೀಟಿಯವರಿಗೆ ಗೋಗರೆದು 25 ಸಾವಿರ ವಂತಿಗೆಯನ್ನು ನೀಡಿರುತ್ತಾರೆ. ಕೌಜಲಗಿ ಗ್ರಾಮದಲ್ಲಿ ನಾನು ಅಭಿವೃದ್ಧಿ ಕೆಲಸವನ್ನು ಯಾವ ರೀತಿ ಮಾಡಿದ್ದೇನೆ, ಅರವಿಂದ ದಳವಾಯಿ ಏನು ಮಾಡಿದ್ದಾನೆ ಎನ್ನುವುದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ ಫಾರ್ಮ ಸಿಗುವವರೆಗೆ ಜನತಾದಳ (ಯು) ಪಕ್ಷದಲ್ಲಿದ್ದ ಅರವಿಂದ ದಳವಾಯಿ ಬಿ ಫಾರ್ಮ ಸಿಕ್ಕ ಮೇಲೆ ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಬದಲಾವಣೆಯಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಚಮಚಾಗಿರಿ ಮಾಡುತ್ತಾ ಯುವ ಜನತಾದಳದ ಅಧ್ಯಕ್ಷನಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ರಾಜ್ಯದ ತುಂಬ ಟೀಕೆ ಮಾಡುತ್ತ ತಿರುಗಾಡಿದ್ದನ್ನು ಈ ನಾಡಿನ ಜನತೆ ಇನ್ನೂ ಮರೆತಿಲ್ಲ. 1999ರಲ್ಲಿ ಜನತಾದಳದಿಂದ ನನಗೆ, ಡಿ.ಎಂ.ದಳವಾಯಿ ಹಾಗೂ ಎಸ್.ಎಂ. ಲಾತೂರ ಈ ಮೂವರಲ್ಲಿ ಒಬ್ಬರಿಗೆ ಅರಭಾವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮಾನ್ಯ ಸಿದ್ಧರಾಮಯ್ಯನವರು ನಿರ್ಧಾರ ಮಾಡಿದ್ದರು. ಅರವಿಂದ ದಳವಾಯಿ ಕುತಂತ್ರ ಮಾಡಿ ನಮಗೆ ಟಿಕೇಟ ತಪ್ಪಿಸಿದ್ದನ್ನು ಇನ್ನೂ ನಾವು ಯಾರೂ ಮರೆತಿಲ್ಲ.
1999ರಿಂದ ಇಲ್ಲಿಯವರೆಗೆ ಎಲ್ಲಾ ಚುನಾವಣೆಗಳಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ ಅರವಿಂದ ದಳವಾಯಿಗೆ ಅವರ ಚುನಾವಣೆಯಲ್ಲಿ ನಾನು ಸಹಾಯವನ್ನು ಮಾಡುವ ಪ್ರಶ್ನೆಯೇ ಬರುವುದಿಲ್ಲ. ಆದರೂ ಸಹಿತ ಕೌಜಲಗಿ ಗ್ರಾಮದ ಸಂಘ ಸಂಸ್ಥೆಗಳಲ್ಲಿ ಅವರ ಮನೆತನದವರಿಗೆ ಅಧಿಕಾರ ಕೊಡಿಸಲು ಸಹಾಯ ಮಾಡಿದ್ದೇನೆ. ನಾನು ಯಾರನ್ನೂ ರಾಜಕೀಯವಾಗಿ ದ್ವೇಷಿಸುವುದಿಲ್ಲ. ಆದರೆ ನಾನು ನಂಬಿದ ತತ್ವ ಸಿದ್ಧಾಂತಗಳಂತೆ ನನ್ನ ರಾಜಕೀಯದಲ್ಲಿ ಇರುತ್ತದೆ. ಅರವಿಂದ ದಳವಾಯಿಯ ಯಾವುದೇ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಣ್ಣಕ್ಕಿ ಅವರು ಎಚ್ಚರಿಕೆ ನೀಡಿದ್ದಾರೆ.

Related posts: