ಬೆಳಗಾವಿ:ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚನೆ
ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚನೆ
ಬೆಳಗಾವಿ ಜು 29: ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವ್ಹಿ.ದೇಶಪಾಂಡೆ ಅವರು ದಾಂಡೆಲಿಯಲ್ಲಿ ಆರಂಭಿಸಲಾಗುತ್ತಿರುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ಅಕಾಡೆಮಿಯ ಪ್ರಗತಿಪರಿಶೀಲನೆ ಸಭೆ ನಡೆಸಿದರು. ಬರುವ ಆಗಸ್ಟ್ ಮಾಸಾಂತ್ಯದೊಳಗೆ ತರಬೇತಿ ನೀಡಲು ಉದ್ದೇಶಿಸಿರುವ ಕೋರ್ಸ್ ಗಳ ಕುರಿತು ಪಠ್ಯಕ್ರಮ ರೂಪಿಸಿ, ತರಬೇತಿಗೆ ಸಿದ್ದವಿರುವ ಅಭ್ಯರ್ಥಿ ಗಳ ಪಟ್ಟಿ ಸಿದ್ದಗೊಳಿಸಲು ಅಕಾಡಮಿಯ ವಿಶೇಷ ಕರ್ತವ್ಯ ಅಧಿಕಾರಿಗೆ ಅವರು ಸೂಚಿಸಿದರು.
ಬರುವ ಅಕ್ಟೋಬರ್ ಮೊದಲ ವಾರದೊಳಗೆ ಕೌಶಲ್ಯ ಅಭಿವೃದ್ದಿ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಿದ್ದಗೊಳಿಸಬೇಕು. ತರಬೇತಿಗೆ ಅಗತ್ಯವಿರುವ ಯಂತ್ರೋಪಕರಣಗಳ ಖರೀದಿ ಮಾಡುವ ಮೂಲಕ ಉತ್ತಮ ತರಬೇತಿಗೆ ಸಿದ್ದಗೊಳಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ತರಬೇತಿ ಪಡೆದ ಪ್ರತಿ ಅಭ್ಯರ್ಥಿ ಉದ್ಯೋಗ ಪಡೆಯುವ ಹಾಗೂ ಸ್ವಂತ ಉದ್ಯೋಗ ಮಾಡುವಂತೆ ಕೌಶಲ್ಯಯುತವಾಗಿ ರೂಪಗೊಳ್ಳುವಂತೆ ಕಾಳಜಿವಹಿಸಬೇಕೆಂದು ಸಚಿವ ದೇಶಪಾಂಡೆಯವರು ತಿಳಿಸಿದರು.
ಸಭೆಯಲ್ಲಿ ಅಕಾಡೆಮಿಯ ವಿಶೇಷ ಕರ್ತವ್ಯ ಅಧಿಕಾರಿ ಎನ್.ಸಂಜೀವಕುಮಾರ ಮಾತನಾಡಿ, ಕಟ್ಟಡ ಕಾಮಗಾರಿ ಶೇ.೮೦ ರಷ್ಟು ಮುಗಿದಿದೆ. ಇನ್ನು ಎರಡು ತಿಂಗಳ ಒಳಗಾಗಿ ಆಡಳಿತ ವಿಭಾಗ, ಉಪನ್ಯಾಸ ಕೊಠಡಿ, ಪ್ರಯೋಗಾಲಯ, ತರಬೇತಿಗೆ ಬರುವ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿನಿಲಯ ಸೇರಿದಂತೆ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಅವರು ಸಭೆಗೆ ತಿಳಿಸಿದರು. ಸಭೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಎಕಸ್ ಕಂಪನಿಯ ಚೇರಮನ ಮತ್ತು ಮುಖ್ಯ ಕಾರ್ಯನಿರ್ವಾಹಕ ಅರವಿಂದ ಮೆಳ್ಳಿಗೇರಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗದ ಉಪಾಧ್ಯಕ್ಷ ಪಿ.ಮದನ ಮೋಹನ, ನೇಟಾಲಕರ ಕೌಗಾರಿಕಾ ಸಮೂಹದ ಮುಖ್ಯಸ್ಥೆ ಶ್ರೀಮತಿ ಸೋನಿಯಾ ನೇಟಾಲಕರ, ಜಂಟಿ ನಿರ್ದೇಶಕ ಸಿದ್ದಪ್ಪ, ಲಕ್ಕನ್ನ ಸವಸುದ್ದಿ ಸೇರಿದಂತೆ ಅಕಾಡೆಮಿಯ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.