ಮೂಡಲಗಿ:ಸ್ವಾಭಿಮಾನ ಮತ್ತು ಸ್ವಾವಲಂಬನೆ ಹೊಂದುವ ಮೂಲಕ ಬದುಕಿನ ಯಶಸ್ಸು ಕಾಣಬೇಕು : ಡಾ. ಎಸ್.ಎಸ್. ದೇಸಾಯಿ

ಸ್ವಾಭಿಮಾನ ಮತ್ತು ಸ್ವಾವಲಂಬನೆ ಹೊಂದುವ ಮೂಲಕ ಬದುಕಿನ ಯಶಸ್ಸು ಕಾಣಬೇಕು : ಡಾ. ಎಸ್.ಎಸ್. ದೇಸಾಯಿ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 30 :
ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸ್ವಾಭಿಮಾನ ಮತ್ತು ಸ್ವಾವಲಂಬನೆ ಹೊಂದುವ ಮೂಲಕ ಬದುಕಿನ ಯಶಸ್ಸು ಕಾಣಬೇಕು ಎಂದು ಚಡಚಣ ಸಂಗಮೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್.ಎಸ್. ದೇಸಾಯಿ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2019-20ನೇ ಸಾಲಿನ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪಾಲಕರಿಗೆ ಮತ್ತು ಸಮಾಜಕ್ಕೆ ಹೊರೆಯಾಗಬಾರದು ಎಂದರು.
ವಿದ್ಯೆಪಡೆಯುವುದು ಕೇವಲ ಕಾಟಾಚಾರಕ್ಕೆ ಆಗಬಾರದು. ಜ್ಞಾನವನ್ನು ಪಡೆಯುವ ಹಂಬಲ, ತುಡಿತ ಇರಬೇಕು. ಸ್ಪಷ್ಟವಾದ ಗುರಿ, ಉದ್ಧೇಶವಿರಬೇಕು. ಅಂದರೆ ಮಾತ್ರ ವ್ಯಕ್ತಿಯಲ್ಲಿ ಜ್ಞಾನ ಪ್ರತಿಭೆಯು ಅರಳುವುದು ಎಂದರು.
ವ್ಯಕ್ತಿತ್ವ ರೂಪಿಸುವ ಶಕ್ತಿ ಪುಸ್ತಕಗಳಿಗಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ನಿರಂತರ ಓದಿನ ಮೂಲಕ ಸಾಧನೆಯತ್ತ ಸಾಗಬೇಕು. ಪುಸ್ತಕಗಳು ವ್ಯಕ್ತಿಯನ್ನು ಸಾಂಸ್ಕøತಿಕವಾಗಿ ಮತ್ತು ಮಾನಸಿಕವಾಗಿ ಸದೃಢವನ್ನಾಗಿಸುವ ಸಂಜೀವಿನಿಗಳು ಎಂದರು.
ಉತ್ತಮ ಆರೋಗ್ಯ, ಪ್ರತಿಭೆ ಹಾಗೂ ಕ್ರೀಯಾಶೀಲತೆಯಿಂದ ಮಾಡಬೇಕೆನ್ನುವ ಛಲ ಇದ್ದರೆ ಜೀವನದಲ್ಲಿ ಎಂಥ ಸಾಧನೆಯನ್ನು ಮಾಡಲು ಸಾಧ್ಯ. ನಿಮ್ಮ ಸಾಧನೆಯು ಪಾಲಕರಿಗೆ, ಕಲಿಸಿದ ಶಿಕ್ಷಕರಿಗೆ ಶ್ರೇಯಸ್ಸನ್ನು ತರುವಂತರಿಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿವೃತ್ತರಾದ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪಿ.ಕೆ. ರಡ್ಡೇರ ಅವರನ್ನು ಸನ್ಮಾನಿಸಿದರು.
ಸಂಸ್ಥೆ ನಿರ್ದೇಶಕ ಆರ್.ಪಿ. ಸೋನವಾಲಕರ, ಆರ್.ಬಿ. ನಂದಗಾಂವಿ, ವಿದ್ಯಾರ್ಥಿ ಒಕ್ಕೂಟ ಉಪಾಧ್ಯಕ್ಷ ಪ್ರೊ. ಜಿ. ಸಿದ್ರಾಮ್ರಡ್ಡಿ ವೇದಿಕೆಯಲ್ಲಿದ್ದರು.
ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಸ್ವಾಗತಿಸಿದರು, ಪ್ರೊ. ಸಂಗಮೇಶ ಗುಜಗೊಂಡ ಪರಿಚಯಿಸಿದರು, ಪ್ರೊ.ಎ.ಪಿ. ರಡ್ಡಿ, ಪ್ರೊ. ಮೀಶಿ ನಾಯ್ಕ್ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಡಾ. ವಿ.ಆರ್. ದೇವರಡ್ಡಿ ವಂದಿಸಿದರು.