ಬೆಳಗಾವಿ:ಲೋಕಸಭೆ ಪೈಟ್ : ಜಿಲ್ಲಾ ಕೈ ನಾಯಕರಿಗೆ ಸಿದ್ದು ಕರೆ
ಲೋಕಸಭೆ ಪೈಟ್ : ಜಿಲ್ಲಾ ಕೈ ನಾಯಕರಿಗೆ ಸಿದ್ದು ಕರೆ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 14 :
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಾಗೂ ಜಿಲ್ಲಾ ನಾಯಕರಲ್ಲಿಯ ಭಿನ್ನಮತ ಶಮನ ಮಾಡುವ ಸಂಬಂಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಹತ್ವದ ಸಭೆ ಕರೆದಿದ್ದಾರೆಂದು ತಿಳಿದು ಬಂದಿದೆ
ನಿನ್ನೆ ಸಂಜೆಯೇ ಕಾಂಗ್ರೆಸ್ನ ಎಲ್ಲ ಹಾಲಿ ಶಾಸಕರು, ಮಾಜಿ ಶಾಸಕರು, ಹಾಲಿ ಸಂಸದರು ಹಾಗೂ ಮಾಜಿ ಸಂಸದರಿಗೆ ಸಿದ್ದರಾಮಯ್ಯ ಅವರಿಂದ ಬುಲಾವ್ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಪ್ರಕಾಶ್ ಹುಕ್ಕೇರಿ, ಮಾಜಿ ಶಾಸಕ ಫಿರೋಜ್ ಸೇಠ್, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ್, ಉದ್ಯಮಿ ಶಿವಕಾಂತ ಸಿದ್ನಾಳ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಬಹುತೇಕರು ಇಂದು ಬೆಳಗ್ಗೆ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಿದರು.
ಶಾಸಕರಾದ ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಬೆಂಗಳೂರಿನಲ್ಲೇ ಇದ್ದು, ಅಲ್ಲಿಂದಲೇ ಸಭೆಗೆ ತೆರಳಲಿದ್ದಾರೆ. ಇನ್ನು ಮಂಗಳೂರಿನಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಕರೆದಿರುವ ಮಹತ್ವದ ಸಭೆಗೆ ಗೈರುಹಾಜರಾಗಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತನ್ನ ಸಹೋದರನಿಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿರುವುದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ಮಂಡಿಸಬಹುದು. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳಲಿದೆ ಎಂದರು.