ಮೂಡಲಗಿ:ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ
ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಫೆ 15 :
ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೆ ಆಗಬೇಕು. ಪಾಲಕರು, ಶಿಕ್ಷಕರು ನಿಮಗೆ ಕೇವಲ ಮಾರ್ಗದರ್ಶಕರು’ ಎಂದು ಧಾರವಾಡದ ಕ್ಯಾಪ್ಟನ್ ಸಿ.ಎಸ್. ಆನಂದ ಹೇಳಿದರು.
ಇಲ್ಲಿಯ ಎಸ್ಎಸ್ಆರ್ ಪ್ರೌಢ ಶಾಲೆಯಲ್ಲಿ ಉಪಖಾಜಾನೆ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರು ಪಟ್ಟಣದಲ್ಲಿಯ ಪ್ರೌಢ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷೆಯ ಸಿದ್ದತೆ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಾಧನೆ ಮಾಡಬೇಕು ಎನ್ನುವ ಕಿಚ್ಚು ನಿಮ್ಮೊಳಗಿನಿಂದ ಬರಬೇಕು ಎಂದರು.
ಹಣ, ಆಸ್ತಿಗಿಂತ ಜ್ಞಾನಕ್ಕೆ ಯಾವತ್ತು ಬೆಲೆ ಇರುತ್ತದೆ. ಜಗತ್ತನ್ನು ಆಳುವುದು ಕೇವಲ ಜ್ಞಾನ. ಜ್ಞಾನ ಇದ್ದರೆ ಮಾತ್ರ ಜಗತ್ತಿನ ಎಲ್ಲಿಯಾದರೂ ಬದುಕಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇವಲ ಅಂಕಗಳನ್ನು ಪಡೆದರೆ ಸಾಲದು ಸಮಾಜವು ಮೆಚ್ಚುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಾಧನೆಯ ಜೊತೆಗೆ ಸಮಾಜಕ್ಕೆ ಬೆಳಕಾಗಬೇಕು ಎಂದರು.
ಉಪಖಜಾನೆಯ ಸಹಾಯಕ ಖಜಾನೆ ಅಧಿಕಾರಿ ಶಿವನಗೌಡ ಬಿರಾದಾರ ಮಾತನಾಡಿ ನಿಜವಾದ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿದ್ದು, ಅಂಥ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸ ಕಾರ್ಯಾಗಾರವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಮಾತನಾಡಿ ಈ ಬಾರಿ ಮೂಡಲಗಿ ವಲಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವತ್ತ ಈಗಾಗಲೆ ಸಿದ್ಧತೆಯನ್ನು ಮಾಡಿಕೊಂಡಿರುವ ಬಗ್ಗೆ ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಉಪಪ್ರಾಚಾರ್ಯ ಎ.ಆರ್. ಶೇಗುಣಶಿ, ಕೆ.ಎಚ್. ಸೋನವಾಲ್ಕರ್ ಶಾಲೆ ಮುಖ್ಯೋಪಾಧ್ಯಾಯ ಎಸ್.ಬಿ. ನೇಮಗೌಡರ, ಉರ್ದು ಶಾಲೆಯ ನೀಲಮ್ಮಾ ಬೋವಿ, ಉಮಾಬಾಯಿ ಶಾಲೆಯ ಪಿರೋಜಿ ಇದ್ದರು.
ಸಿ.ಎಸ್. ಮೋಟೆಪ್ಪಗೋಳ ಸ್ವಾಗತಿಸಿದರು, ಸಿ.ಎಂ. ಹಂಜಿ ನಿರೂಪಿಸಿದರು, ಯು.ಬಿ. ದಳವಾಯಿ ವಂದಿಸಿದರು.