RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ:ಡಿ.12 ರಂದು ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ : ಡಾ. ರಾಜು ಕಂಬಾರ

ಬೆಳಗಾವಿ:ಡಿ.12 ರಂದು ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ : ಡಾ. ರಾಜು ಕಂಬಾರ 

ಡಿ.12 ರಂದು ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ : ಡಾ. ರಾಜು ಕಂಬಾರ

ಬೆಳಗಾವಿ ನ 27 : ಅತಿಥಿ ಉಪನ್ಯಾಸಕರು ಸಂಘಟನಾತ್ಮಕವಾಗಿ ಹೋರಾಡಿದರೆ ಜಯ ದೊರೆಯುತ್ತದೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ದೊರೆಯುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಅದಕ್ಕಾಗಿ ಬೆಳಗಾವಿ ಸುವರ್ಣ ಸೌಧದ ಎದುರು ಡಿಸೆಂಬರ್ 12 ರಂದು ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಡಾ. ರಾಜು ಕಂಬಾರ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಜರುಗಿದ ಅತಿಥಿ ಉಪನ್ಯಾಸಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ 10 ವರ್ಷಗಳಿಂದ ಸಂಘವು ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಂಘಟನಾತ್ಮಕವಾಗಿ ಪ್ರತಿಭಟನೆಗಳನ್ನು ಮಾಡುತ್ತಲೇ ಬಂದಿದೆ. ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡಿದ್ದೇವೆ. ಬಡತನದ ಬೇಗೆಯಲ್ಲಿ ಬೆಂದು ನೊಂದು 10 ವರ್ಷಗಳ ಅವಧಿಯಲ್ಲಿ ಹಲವಾರು ಅತಿಥಿ ಉಪನ್ಯಾಸಕರು ಅಸುನೀಗಿದ್ದಾರೆ. ನೂರಾರು ಅತಿಥಿ ಉಪನ್ಯಾಸಕರ ವಯೋಮಿತಿ ಮೀರಿದೆ. ಸರಕಾರ ಮಾನವೀಯತೆಯ ನೆಲೆಯಲ್ಲಾದರೂ ಯೋಚಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕೆಂದು ಸಭೆಯಲ್ಲಿ ತೀರ್ಮಾಣಿಸಲಾಯಿತು. ಕಂಬಾರವರು ಮುಂದುವರೆದು 2018ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿಯವರಿಗೆ ಭೇಟಿಯಾದ ಸಂದರ್ಭದಲ್ಲಿ – “ನಮ್ಮ ಸರ್ಕಾರ ರಚನೆಯಾಗಿ ನಾನು ಮುಖ್ಯಮಂತ್ರಿಯಾದರೆ ಖಂಡಿತವಾಗಿಯೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವುದಾಗಿ” ಹೇಳಿದ್ದರು. ಅದರಂತೆ ಜೆ.ಡಿ.ಎಸ್. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕ್ರ.ಸಂ.29 ರಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಾಗುವುದೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಡಾ. ರಾಜು ಕಂಬಾರ ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಗದಗದ ಹಣಮಂತಗೌಡಾ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರ ಸಂಘಟನೆಯನ್ನು ಹುಟ್ಟುಹಾಕಿದ್ದೇ ಉತ್ತರ ಕರ್ನಾಟಕದವರು. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಖಂಡಿತವಾಗಿಯೂ ಸೇವಾ ಭದ್ರತೆ ದೊರೆಯುತ್ತದೆ. ನಮ್ಮಲ್ಲಿರುವ ಭಿನ್ನಭಿಪ್ರಾಯವನ್ನು ತೊಲಗಿಸಿ ಹೋರಾಟ ಮಾಡಬೇಕೆಂದು ಹೇಳಿದರು. ಜಿಲ್ಲಾ ಮುಖಂಡರಾದ ರವಿ ನೆಟಗೇರಿ, ಶಿವಾನಂದ ಕಲ್ಲೂರ, ಕಾರ್ಯದರ್ಶಿ ವಿ.ಎಮ್. ಮಾಳವದೆ, ಖಜಾಂಚಿ ಕಲ್ಮೇಶ ಕಾಂಬಳೆ, ಉಪಾಧ್ಯಕ್ಷೆ ಡಾ. ಜಯಶ್ರೀ ಹಂಚಿನಮನಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಾಯ್.ಕೆ. ಕುರಿ, ಎ.ಬಿ. ಇಟಗಿ, ಆರ್.ಡಿ. ಬಡಿಗೇರ, ಕು. ರೇಖಾ ಹಳೆಮನಿ, ಶ್ರೀಮತಿ ಉಷಾ ಕಟ್ಟಿಮನಿ, ಹುಚ್ಚನ್ನವರ, ಮುಂತಾದ ಅತಿಥಿ ಉಪನ್ಯಾಸಕರು ಸಭೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಿದರು.
ನಿಂಗಪ್ಪಾ ಸಂಗ್ರೇಜಿಕೊಪ್ಪ ಸ್ವಾಗತಿಸಿ ನಿರೂಪಿಸಿದರು, ನೀಲಕಂಠ ಭೂಮನ್ನವರ ವಂದಿಸಿದರು.

Related posts: