RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಚೀಟಿ ಎತ್ತುವ ಮೂಲಕ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಗೋಕಾಕ:ಚೀಟಿ ಎತ್ತುವ ಮೂಲಕ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ 

ಚೀಟಿ ಎತ್ತುವ ಮೂಲಕ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

*ಅಡಿವೇಶ ಮುಧೋಳ ಬೆಟಗೇರಿ

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸದಾಶಿವ ಕುರಿ, ಉಪಾಧ್ಯಕ್ಷರಾಗಿ ಬಸವ್ವ ದೇಯಣ್ಣವರ ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಆಯ್ಕೆಗೊಂಡಿದ್ದಾರೆ. ಸ್ಥಳೀಯ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ತಾಪಂ ಹಾಲಿ ಸದಸ್ಯ ಲಕ್ಷ್ಮಣ ನೀಲಣ್ಣವರ ಗುಂಪಿನ ಪರ ಅದೃಷ್ಟವಶಾತ್ ಎರಡೂ ಸ್ಥಾನಗಳ ಅಭ್ಯರ್ಥಿಗಳ ಹೆಸರು ಚೀಟಿಯಲ್ಲಿ ಬಂದು ಈ ಗುಂಪಿನ ಅಭ್ಯರ್ಥಿಗಳು ಜಯ ಸಾಧಿಸಿದಂತಾಗಿದೆ.
ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತಾವಧಿ ಇನ್ನೂ 1 ವರ್ಷ 7 ತಿಂಗಳು ಬಾಕಿ ಇರುವಾಗಲೇ ಸಂಘದ ಅಧ್ಯಕ್ಷ ರಾಮಪ್ಪ ಬಳಿಗಾರ ಮತ್ತು ಉಪಾಧ್ಯಕ್ಷೆ ಉದ್ದವ್ವ ಬಾಣಸಿ ಸ್ವ ಇಚ್ಛೆಯಿಂದ ಕಳೆದ ಜುಲೈ 19 ರಂದು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗ್ರಾಮದ ಎರಡು ಗುಂಪಿನ ರಾಜಕೀಯ ಮುಖಂಡರ ನಡುವೆ ತೀವ್ರ ಪೈಪೋಟಿ ಮೂಲಕ ಗುರುವಾರ ಸೆ.6 ರಂದು ಚುನಾವಣೆ ನಡೆದು ಉಭಯ ಸ್ಥಾನಗಳ ಅಭ್ಯರ್ಥಿಗಳಿಗೆ ಸರಿಸಮ ಮತಗಳು ಬಿದ್ದಿದ್ದರಿಂದ ಚುನಾವಣೆ ಮುಂದುಡಲಾಗಿತ್ತು.
ಸರಿಸಮವಾದ ಮತಗಳು: ಒಂದು ಗುಂಪಿನಿಂದ ಸದಾಶಿವ ಕುರಿ ಅಧ್ಯಕ್ಷ ಸ್ಥಾನಕ್ಕೆ, ಬಸವ್ವ ದೇಯಣ್ಣವರ ಉಪಾಧ್ಯಕ್ಷ ಸ್ಥಾನಕ್ಕೆ, ಇನ್ನೊಂದು ಗುಂಪಿನಿಂದ ಲಕ್ಷ್ಮಣ ಸವತಿಕಾಯಿ ಅಧ್ಯಕ್ಷ ಸ್ಥಾನಕ್ಕೆ, ಶಿವಪ್ಪ ಕತ್ತಿ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಸಂಘದ ಆಡಳಿತ ಮಂಡಳಿ ಒಟ್ಟು 10 ಜನ ಸದಸ್ಯರೆಲ್ಲರೂ ಮತ ಚಲಾವಣೆ ಮಾಡಿ, ಎರಡು ಗುಂಪಿನ ಅಭ್ಯರ್ಥಿಗಳಿಗೆ ಉಭಯ ಸ್ಥಾನಗಳಿಗೆ 5-5 ಮತಗಳು ಬಿದ್ದಿದ್ದರಿಂದ ಫಲಿಂತಾಶ ಸಮಬಲವಾಗಿದ್ದರಿಂದ ಸಂಘದ ಎರಡೂ ಸ್ಥಾನಗಳಿಗೆ ಮತ್ತೊಮ್ಮೆ ಚುನಾವಣೆ ನಡೆಯುವಂತಾಗಿತ್ತು. ಶನಿವಾರ ಸೆ.15 ರಂದು 12.30 ಗಂಟೆಗೆ ಮತ್ತೇ ಚುನಾವಣೆ ದಿನಾಂಕ ನಿಗದಿ ಮಾಡಲಾಗಿತ್ತು.
ಚೀಟಿ ಎತ್ತುವ ಮೂಲಕ ಆಯ್ಕೆ : ಇಲ್ಲಿಯ ಪಿಕೆಪಿಎಸ್ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ಸೆ.6 ರಂದು ಜರುಗಿದ ಚುನಾವಣೆಯ ಮುಂದುವರೆದ ಭಾಗವಾಗಿ ಶನಿವಾರದಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡು ಗುಂಪಿನ ಉಭಯ ಸ್ಥಾನಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಚಿಕ್ಕ ಮಕ್ಕಳ ಕೈಯಿಂದ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಎಸ್.ಎ.ದೊಡ್ಡಮನಿ ಅವರು ತಿಳಿಸಿದರು.
ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದ ಇಲ್ಲಿಯ ಪಿಕೆಪಿಎಸ್ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ಶಾಂತಿ ಸುವ್ಯವಸ್ಥೆಯಿಂದ ನಡೆಯಿತು. ಪೊಲೀಸ್ ಬಂದುಬಸ್ತ್ ಆಯೋಜಿಸಲಾಗಿತ್ತು. ಸ್ಥಳೀಯ ಎರಡು ಗುಂಪಿನ ರಾಜಕೀಯ ಮುಖಂಡರು, ಬೆಂಬಲಿಗರು, ಗ್ರಾಮಸ್ಥರು ಸಂಘದ ಆವರಣದಲ್ಲಲ್ಲಿ ಕುತೂಹಲದಿಂದ ಫಲಿಂತಾಶ ತಿಳಿಯಲು ತುದಿಗಾಲಿನಿಂದ ನಿಂತುಕೊಂಡದ್ದು ವಿಶೇಷವಾಗಿತ್ತು.
ಚುನಾವಣಾಧಿಕಾರಿ ಎಸ್.ಎ.ದೊಡ್ಡಮನಿ, ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಆರ್.ವೈ.ಬೀಳಗಿ, ಗೋಕಾಕ ಸಿಡಿಒ ಕಛೇರಿಯ ನಿರೀಕ್ಷಕ ಎಸ್.ಬಿ.ಬಿರಾದಾರಪಾಟೀಲ, ಬಿಡಿಸಿಸಿ ಬ್ಯಾಂಕಿನ ಗೋಕಾಕ ಪೂರ್ವಭಾಗದ ಬ್ಯಾಂಕ್ ನಿರೀಕ್ಷಕ ಆರ್.ಎಸ್.ಸನದಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಸಿಬ್ಬಂದಿ, ಪೊಲೀಸ್ ಪೇದೆಗಳು, ಮತ್ತಿತರರು ಇದ್ದರು.

Related posts: