ಮೂಡಲಗಿ:ಜನರ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ: ಶಾಸಕ ಬಾಲಚಂದ್ರ

ಜನರ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ: ಶಾಸಕ ಬಾಲಚಂದ್ರ
ಮೂಡಲಗಿ ಮಾ 5: ಲೋಕೋಪಯೋಗಿ ಇಲಾಖೆಯ ಎಸ್.ಸಿ.ಪಿ ಯೋಜನೆಯಡಿ ಗುಜನಟ್ಟಿ ಗ್ರಾಮದಲ್ಲಿ 50 ಲಕ್ಷ ಹಾಗೂ 30 ಲಕ್ಷ ರೂ, ವೆಚ್ಚದ ಮಸಗುಪ್ಪಿ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾನುವಾರದಂದು ಸಂಜೆ ಗುದ್ದಲಿ ಪೂಜೆ ನೆರವೇರಿಸಿದರು.
ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಅರಭಾಂವಿ ಮತಕ್ಷೇತ್ರದಲ್ಲಿ ಈಗಾಗಲೇ ವಿವಿಧ ಇಲಾಖೆಗಳಡಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಏಪ್ರೀಲ್ ತಿಂಗಳೊಳಗೆ ಮುಗಿಯಲಿವೆ. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗುಜನಟ್ಟಿ ಹಾಗೂ ಮಸಗುಪ್ಪಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿರುವಂತೆಯೇ ಕೆಲವರು ಬಂದು ಹೋಗುತ್ತಿರುತ್ತಾರೆ. ಕೆಲ ವದಂತಿಗಳನ್ನು ಹಬ್ಬಿಸುತ್ತಾ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡುತ್ತಿರುತ್ತಾರೆ. ಅಂತಹ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ 14 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ. ಜನರ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಮೇ ತಿಂಗಳಿನಲ್ಲಿ ಜರುಗುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿ ಆಯ್ಕೆ ಮಾಡಬೇಕು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಮತ್ತೊಮ್ಮೆ ಜನಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಮುಖಂಡರಾದ ಶಿದ್ಲಿಂಗಪ್ಪಾ ಕಂಬಳಿ, ಕಲ್ಲಪ್ಪ ಉಪ್ಪಾರ, ಅಪ್ಪಯ್ಯ ಬಡ್ನಿಂಗಗೋಳ, ಕೃಷ್ಣಪ್ಪಾ ಬಂಡ್ರೊಳ್ಳಿ, ಮುತ್ತೆಪ್ಪಾ ಕುಳ್ಳೂರ, ಹಣಮಂತ ತೇರದಾಳ, ಮಸಗುಪ್ಪಿ ಗ್ರಾ.ಪಂ ಅಧ್ಯಕ್ಷೆ ಸಾಂವಕ್ಕಾ ಬೋಜನ್ನವರ, ಸಿದ್ಧಾರೂಢ ಮುಕ್ಕನ್ನವರ, ಭರಮಪ್ಪ ಅಸಿರೊಟ್ಟಿ, ರಾಮಪ್ಪಾ ಅರಭಾಂವಿ, ಪತ್ರಯ್ಯಾ ಚರಂತಿಮಠ, ಅಶೋಕ ಮಕ್ಕಳಗೇರಿ, ಬಸು ಭುಜನ್ನವರ, ಮಲ್ಲಪ್ಪ ಬಂಡ್ರೊಳ್ಳಿ, ಸಂಜು ಹೊಸಕೋಟಿ, ರಂಗಪ್ಪ ಶೇಖನ್ನವರ, ಲಕ್ಷ್ಮಣ ಕೆಳಗಡೆ, ಬಿ.ಬಿ.ಪೂಜೇರಿ, ಪಾಂಡು ಮಳಲಿ, ಸಿದ್ಧಾರೂಢ ಜಮನಾಳ, ಭೀಮಪ್ಪಾ ನಾಂವಿ, ವಿಠ್ಠಲ ಮೊಕಾಶಿ, ಸಿದ್ದಪ್ಪಾ ಹೆಳವರ, ಬಸು ಬಂಡ್ರೊಳ್ಳಿ, ಲಕ್ಷ್ಮಣ ಕತ್ತಿ, ಯಮನಪ್ಪ ಹುಣಶೀಗಿಡದ, ಇಂಜನೀಯರ್ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗುಜನಟ್ಟಿ ಗ್ರಾಮಸ್ಥರು ಸತ್ಕರಿಸಿದರು.
ಜೋಕಾನಟ್ಟಿಗೆ ಭೇಟಿ ;- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಜೋಕಾನಟ್ಟಿ ಗ್ರಾಮಕ್ಕೆ ಭೆಟಿ ನೀಡಿದರು. ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜೋಕಾನಟ್ಟಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದ ಹಲವು ಮಹತ್ತರ ಯೋಜನೆಗಳನ್ನು ಅರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಗ್ರಾಮದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.