ಗೋಕಾಕ:ನರ್ಸಿಂಗ್ ಡಿಪ್ಲೋಮಾ ಹಾಗೂ ಬಿಸಿಎ ಕಾಲೇಜ ಪ್ರಾರಂಭ : ಜಯಾನಂದ ಮುನವಳ್ಳಿ
ನರ್ಸಿಂಗ್ ಡಿಪ್ಲೋಮಾ ಹಾಗೂ ಬಿಸಿಎ ಕಾಲೇಜ ಪ್ರಾರಂಭ : ಜಯಾನಂದ ಮುನವಳ್ಳಿ
ಗೋಕಾಕ ಜ, 28 ;- ಹೆಚ್ಚು ಉದ್ಯೋಗಾವಕಾಶಗಳು ಇರುವ ನರ್ಸಿಂಗ್ ಡಿಪ್ಲೋಮಾ ಹಾಗೂ ಬಿಸಿಎ ಕಾಲೇಜುಗಳನ್ನು ಕೆಎಲ್ಇ ಸಂಸ್ಥೆಯಿಂದ ನಗರದಲ್ಲಿ ಈ ವರ್ಷದಿಂದ ಪ್ರಾರಂಭಿಸಲಾಗುವುದು ಎಂದು ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಭಾನುವಾರದಂದು ನಗರದ ಕೆಎಲ್ಇ ಸೊಸೈಟಿಯ ಸಿ.ಎಸ್.ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣೆ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ನರ್ಸಿಂಗ್ ಹಾಗೂ ಬಿಸಿಎ ಪೂರೈಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಗೋಗಾವಕಾಶಗಳು ಇದ್ದು, ಈ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲು ಈ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಪರಿಶ್ರಮದಿಂದ ಪ್ರಯತ್ನಶೀಲರಾಗಬೇಕು. ವಿದ್ಯಾರ್ಥಿಗಳ ಹಾಗೂ ಪಾಲಕರ ಕನಸುಗಳನ್ನು ನನಸು ಮಾಡಲು ಕೆಎಲ್ಇ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಶ್ರಮಿಸುತ್ತದೆ. ಹಲವಾರು ಹೊಸ ಯೋಜನೆಗಳನ್ನು ಇಲ್ಲಿನ ಕಾಲೇಜಿನಲ್ಲಿ ಆಚರಣೆಗೆ ತರುವುದರೊಂದಿಗೆ ವಲಸೆ ಹೋಗುವ ವಿದ್ಯಾರ್ಥಿಗಳು ಇಲ್ಲಿಯೇ ಹೆಚ್ಚಿನ ಗುಣಮಟ್ಟದ ಶಿಕ್ಷಣ ಪಡೆಯುವಂತ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸುವ ಗುರಿಯೊಂದಿಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ವೇದಿಕೆ ಮೇಲೆ ಕೆಎಲ್ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ ಚೇರಮನ್ ಎಮ್.ಡಿ.ಚುನಮರಿ, ಸದಸ್ಯರಾದ ಪ್ರೊ. ಚಂದ್ರಶೇಖರ ಅಕ್ಕಿ, ಡಿ.ಸಿ.ಬಿದರಿ, ಪ್ರಾಚಾರ್ಯರಾದ ಕೆ.ಸಿ.ಹತಪಾಕಿ, ಎಮ್.ಎ.ಪಾಟೀಲ, ಪಿ.ಎಸ್.ಬಾಸು ಇದ್ದರು.
ಉಪನ್ಯಾಸಕಿ ರಾಜಶ್ರೀ ಹಿರೇಮಠ ಸ್ವಾಗತಿಸಿದರು. ಭಾಗ್ಯಶ್ರೀ ಗುರವ್ ನಿರೂಪಿಸಿದರು. ಶಾಂತಾ ಬುಜನ್ನವರ ವಂದಿಸಿದರು.