ಗೋಕಾಕ:ಕೌಜಲಗಿ ತಾಲೂಕು ರಚನೆಗೆ ಮಠಾಧೀಶರ ಬೆಂಬಲ
ಕೌಜಲಗಿ ತಾಲೂಕು ರಚನೆಗೆ ಮಠಾಧೀಶರ ಬೆಂಬಲ
ಗೋಕಾಕ ಡಿ 20 : ಕೌಜಲಗಿಯ ಭಾಗದ ಜನರ ಬಹುದಿನದ ಬೇಡಿಕೆಯಾದ ಕೌಜಲಗಿ ತಾಲೂಕು ರಚನೆಗೆ ಮಠಾದೀಶರು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಶೀವಾನಂದ ಮಹಾಸ್ವಾಮಿಗಳು ರಾಮದುರ್ಗ ತಾಲೂಕಿನ ಬಾಗೋಜಿಕೊಪ್ಪದ ಶ್ರೀ ಮ.ನಿ.ಪ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮನ್ನಿಕೇರಿ ಶ್ರೀ ಮಹಾಂತಲಿಂಗೇಶ್ವರ ಮಠದ ಶ್ರೀ ವಿಜಯ ಮಹಾಂತೇಶ ಮಹಾಸ್ವಾಮಿಗಳು ಕೌಜಲಗಿ ತಾಲೂಕು ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಕೌಜಲಗಿ ತಾಲೂಕು ರಚನೆಯಾದರೆ ಗೋಕಾಕ ತಾಲೂಕಿನ 20 ಗ್ರಾಮಗಳಿಗೆ ಹಾಗೂ ರಾಮದುರ್ಗ ತಾಲೂಕಿನ ಗಡಿಗ್ರಾಮ, ಸವದತ್ತಿ ತಾಲೂಕಿನ ಗಡಿಗ್ರಾಮಗಳಿಗೆ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ. ದೂರದ ರಾಮದುರ್ಗ-ಸವದತ್ತಿಗಳಿಗೆ ಜನ ಅಲೆದಾಡುವುದು ತಪ್ಪುತ್ತದೆ. ಆದುದರಿಂದ ಕೌಜಲಗಿ ತಾಲೂಕು ಹೋರಾಟ ಪ್ರಾರಂಭಗೊಂಡರೆ, ಕೌಜಲಗಿ ಹಾಗೂ ಸುತ್ತ=ಮುತ್ತಲಿನ ಎಲ್ಲ ಮುಖಂಡರು, ರೈತರು, ರಾಜಕಾರಣಿಗಳು, ಸಾಹಿತಿಗಳು ಎಲ್ಲರೂ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಹೋರಾಟ ಕೈಗೊಂಡರೆ ನಾವು ಜನರ ಜೊತೆ ಹೋರಾಟಕ್ಕಿಳಿಯುತ್ತೇವೆಂದು ಬಾಗೋಜಿಕೊಪ್ಪದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಕೌಜಲಗಿ 40 ವರ್ಷಗಳಿಂದ ತಾಲೂಕು ರಚನೆಗಾಗಿ ಹೋರಾಟ ಮಾಡುತ್ತ ಬಂದಿದೆ. ತಾಲೂಕಾಗಲು ಎಲ್ಲ ಅರ್ಹತೆಗಳನ್ನು ಕೌಜಲಗಿ ಪಟ್ಟಣ ಪಡೆದುಕೊಂಡಿದೆ ಗೋಕಾಕ ತಾಲೂಕಿನ ಜನತೆಯೊಂದಿಗೆ ಸವದತ್ತಿ-ರಾಮದುರ್ಗ ತಾಲೂಕಿನ ಗ್ರಾಮಗಳ ಜನರಿಗೂ ಕೌಜಲಗಿ ತಾಲೂಕು ಆಗುವುದರಿಂದ ಅನುಕೂಲವಾಗುತ್ತದೆ. ಆದರೆ ಎಲ್ಲರೂ ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕು. ಜಾತ್ಯಾತೀತ, ಪಕ್ಷಾತೀತವಾಗಿ ಹೋರಾಡಿದರೆ ಕೌಜಲಗಿ ಖಂಡಿತವಾಗಿಯೂ ತಾಲೂಕು ಆಗುತ್ತದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆಂದು ಹೇಳಿದ್ದಾರೆ.
ಕೌಜಲಗಿ ತಾಲೂಕು ಆಗಲೇಬೇಕು. ತಾಲೂಕು ಆಗಲು ಸುತ್ತಲಿನ 50 ಗ್ರಾಮಗಳಿಗೆ ಮಧ್ಯವರ್ತಿ ಮತ್ತು ವ್ಯಾಪಾರ-ವ್ಯವಹಾರಿಕ, ಶೈಕ್ಷಣಿಕ ಕೇಂದ್ರವೂ ಆಗಿದೆ. ಕೌಜಲಗಿ ತಾಲೂಕು ರಚನೆಯಾದರೆ ಹಿಂದುಳಿದ ಪ್ರದೇಶವೊಂದರ ಅಭಿವೃದ್ಧಿಯ ಶೆಕೆ ಆರಂಭಗೊಳ್ಳುತ್ತದೆ. ಆದರೆ ಕೌಜಲಗಿಯಲ್ಲಿ ಸಂಘಟನೆಯ ಕೊರತೆಯಿದ್ದು ಎಲ್ಲ ಮುಖಂಡರು ಒಂದಾಗಿ ಹೋರಾಟ ಆರಂಭಿಸಿದರೆ ಮೂವರು ಮಠಾಧೀಶರು ಹೋರಾಟದ ನೇತೃತ್ವ ವಹಿಸಿಕೊಳ್ಳಲು ಸಿದ್ದರಿದ್ದೇವೆ ಎಂದು ಮನ್ನಿಕೇರಿ ಶ್ರೀ ಮಹಾಂತಲಿಂಗೇಶ್ವರ ಮಠದ ಶ್ರೀ ವಿಜಯ ಮಹಾಂತೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. ಇದರಿಂದ ಕೌಜಲಗಿ ತಾಲೂಕು ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಮುಖಂಡರು ಒಂದಾಗಿ ಹೋರಾಟಕ್ಕಿಳಿಯುವುದನ್ನು ಜನ ಕಾಯುತ್ತಿದ್ದಾರೆ.