ಗೋಕಾಕ:ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ
ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ
ಗೋಕಾಕ ನ 30 : ಪ್ರಜ್ವಲ ಸಿನಿ ಕ್ರಿಯೇಷನ್ಸ್ ಲಾಂಛನದಡಿ ಗುರುನಾಥ ಗದಾಡಿ ನಿರ್ಮಾಣದ ‘ಲೈಟಾಗಿ ಲವ್ವಾಗಿದೆ’ ಚಲನಚಿತ್ರದ ಮುಹೂರ್ತ ಸಮಾರಂಭವು ನಗರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗುರುವಾರದಂದು ಜರುಗಿತು.
ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದಾರ ನಾಯಕತ್ವದ ‘ಲೈಟಾಗಿ ಲವ್ವಾಗಿದೆ’ ಚಿತ್ರದ ಆರಂಭ ಫಲಕಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಈ ಚಿತ್ರ ಅವಕಾಶ ನೀಡಿದ್ದು, ಈ ಚಲನಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು. ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗುರುನಾಥ ಗದಾಡಿ ಅವರು ಚಿತ್ರ ನಿರ್ಮಾಣದಲ್ಲಿ ಯಶಸ್ವಿಯಾಗಿ ತೊಡಗಿ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುವಂತಾಗಲಿ. ಈ ಪ್ರತಿಭೆಗಳು ಚಿತ್ರರಂಗದಲ್ಲಿ ಮುಂದೆ ಬಂದು ಉತ್ತಮ ಸಾಧನೆ ಮಾಡಲಿ ಎಂದು ಆಶಿಸಿದರು.
ಕಥೆ-ಚಿತ್ರಕಥೆ-ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಗುರುನಾಥ ಗದಾಡಿ ಅವರ ಎರಡನೆಯ ಚಿತ್ರವಾಗಿದೆ. ಈ ಮೊದಲು ಮುತ್ತಿನಂಥ ಮಗಳು ಎಂಬ ಚಿತ್ರವನ್ನು ಮಕ್ಕಳಿಗಾಗಿ ನಿರ್ಮಿಸಿದ್ದಾರೆ. ಚೈತ್ರಾ ಶೆಟ್ಟಿ, ಅನ್ವಿತಾ ನಯ್ಯರ, ಶ್ವೇತಾ ಧಾರವಾಡ, ಸಂಜು ಬಸಯ್ಯ, ಸೋಮಶೇಖರ ಜಾಡರ, ಜ್ಯೋತಿ ಮುರೂರ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಗೋಕಾಕ, ಸಂಕೇಶ್ವರ, ಕೊಪ್ಪಳ, ಬಾಗಲಕೋಟ ಮುಂತಾದ ಉತ್ತರ ಕರ್ನಾಟಕದ ಸ್ಥಳಗಳಲ್ಲಿ ಈ ಚಿತ್ರದ ಚಿತ್ರಿಕರಣವಾಗಲಿದೆ.
ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮಿಗಳು ಈ ಚಿತ್ರಕ್ಕೆ ಕ್ಯಾಮರಾ ಆನ್ ಮಾಡಿದರು.
ಅನ್ವಿತಾ ನಯ್ಯರ ಹಾಗೂ ಶ್ವೇತಾ ಧಾರವಾಡ ಅವರು ಈ ಚಿತ್ರದಲ್ಲಿ ಸಹ ನಾಯಕಿಯರಾಗಿ ನಟಿಸುತ್ತಿದ್ದು ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಉದಯೋನ್ಮುಖ ಪ್ರತಿಭೆಗಳಾಗಿದ್ದಾರೆ.