ಖಾನಾಪುರ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಛತಾ ಕಾರ್ಯಕ್ರಮ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಛತಾ ಕಾರ್ಯಕ್ರಮ
ಖಾನಾಪುರ ನ 22: ಪಟ್ಟಣದ ರೈಲು ನಿಲ್ದಾಣದ ಬಳಿಯ ಪಟ್ಟಣ ಪಂಚಾಯ್ತಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಇತ್ತೀಚೆಗೆ ಇದೇ ಮಂಗಲ ಕಾರ್ಯಾಲಯದಲ್ಲಿ ಒಂದು ವಾರದ ಕಾಲ ಜರುಗಿದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯಾನ ಚಟದಿಂದ ಮುಕ್ತಿ ಹೊಂದಿದ ಒಟ್ಟು 30 ಶಿಬಿರಾರ್ಥಿಗಳು ಸ್ವಯಂಪ್ರೇರಣೆಯಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಂಗಲ ಕಾರ್ಯಾಲಯದ ಸುತ್ತಮುತ್ತಲಿನ ಆವರಣದಲ್ಲಿ ಬೆಳೆದಿದ್ದ ಕಸವನ್ನು ಕಿತ್ತು ನೆಲವನ್ನು ಸಮಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಸಸಿ ನೆಟ್ಟಿ ಪೋಷಿಸುವ ಮೂಲಕ ಆವರಣವನ್ನು ಹಸಿರುಮಯವಾಗಿ ಮಾಡುವ ಸಂಕಲ್ಪವನ್ನು ಶಿಬಿರಾರ್ಥಿಗಳು ಕೈಗೊಂಡರು. ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಸಂತೋಷ ಗಂದಿಗವಾಡ ಮತ್ತು ಪಟ್ಟಣ ಪಂಚಾಯ್ತಿಯ ಸ್ವಚ್ಛತಾ ಅಧಿಕಾರಿ ಪ್ರೇಮಾನಂದ ನಾಯ್ಕ ಶಿಬಿರಾರ್ಥಿಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿ ಅಭಿನಂದಿಸಿದರು.