ಗೋಕಾಕ:ಗೋಕಾಕ ಜಿಲ್ಲಾ ರಚನೆಗಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ : ಉಸ್ತುವಾರಿ ಮಂತ್ರಿ ಸತೀಶಗೆ ಜಿಲ್ಲಾ ಹೋರಾಟ ಚಾಲನಾ ಸಮಿತಿ ಮನವಿ

ಗೋಕಾಕ ಜಿಲ್ಲಾ ರಚನೆಗಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ : ಉಸ್ತುವಾರಿ ಮಂತ್ರಿ ಸತೀಶಗೆ ಜಿಲ್ಲಾ ಹೋರಾಟ ಚಾಲನಾ ಸಮಿತಿ ಮನವಿ
ಗೋಕಾಕ ಜು 19 : ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮೀತಿಯ ನಿಯೋಗವನ್ನು ಭೇಟಿ ಮಾಡಲು ನೇತ್ರತ್ವ ವಹಿಸಿ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮೀತಿಯಿಂದ ನಗರದ ಸಚಿವರ ಕಾರ್ಯಾಲಯದಲ್ಲಿ ಶನಿವಾರದಂದು ಮನವಿ ಅರ್ಪಿಸಿದರು.
ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕೇಂದ್ರ ಸರಕಾರ ಜಾತಿ ಜನಗಣತಿ ನಡೆಸುವ ಕುರಿತು ರಾಜ್ಯದ ಗಡಿಗಳ ವಿಭಜನೆ ಮಾಡಲು ಡಿ.30ರ ವರಗೆ ಕಾಲಾವಕಾಶ ನೀಡಿದ್ದು, ಆದಷ್ಟು ಬೇಗ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ವಿಭಜಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭೇಟಿಗೆ ಅವಕಾಶ ಕಲ್ಪಿಸಿ, ದಶಕಗಳ ಕನಸಾದ ಗೋಕಾಕ ಜಿಲ್ಲಾ ಕೇಂದ್ರಕ್ಕೆ ತಾವೇ ನೇತ್ರತ್ವದ ವಹಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುವಂತೆ, ಜಿಲ್ಲಾ ವಿಭಜನೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಚಿವ ಸತೀಶ ಹೆಗಲಿಗೆ ಹಾಕಿ ಮನವಿ ಮಾಡಿದರು.
ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದ್ದರು. ಈ ಬಗ್ಗೆ ಕರ್ನಾಟಕ ರಾಜ್ಯ ಪತ್ರದಲ್ಲಿ 26ಆಗಸ್ಟ 1997ರಂದು ಅಧಿಕೃತವಾಗಿ ಕಂದಾಯ ಸಚಿವಾಲಯವು ಅದಿಸೂಚನೆ ಹೊರಡಿಸಿತ್ತು. ಕಾರಣಾಂತರದಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಯತಾ ಪ್ರಕಾರ ಮುಂದುವರೆದಿದೆ. ವಾಸುದೇವ ರಾವ್, ಗದ್ದಿಗೌಡರ ಮತ್ತು ಹುಂಡೇಕರ ಮೂರು ಆಯೋಗಗಳು ಜಿಲ್ಲೆಯನ್ನಾಗಿ ಪರಿವರ್ತಿಸಲು ವರದಿ ನೀಡಿವೆ. ಬೆಳಗಾವಿ ಹೊರತುಪಡಿಸಿದರೆ ಗೋಕಾಕ ನಗರವೇ ಅತಿದೊಡ್ಡದು ಈ ನಗರವು ವಾಣಿಜ್ಯ, ಉದ್ಯಮ, ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಭರದಿಂದ ಅಭಿವೃದ್ಧಿ ಹೊಂದುತ್ತಿದೆ. ನಾಗರಿಕರಿಗೆ ಉತ್ತಮ ಸೇವಾ ಸೌಲಭ್ಯ ಹಾಗೂ ಆಡಳಿತ ಸೌಕರ್ಯಗಳನ್ನು ಪೂರೈಸುವ ದೃಷ್ಟಿಕೋನದಿಂದ ಚಿಕ್ಕ ತಾಲೂಕು ಹಾಗೂ ಜಿಲ್ಲೆಗಳ ಅವಶ್ಯಕತೆಗಳನ್ನು ಗಮನಿಸಿ ಆಯೋಗಗಳ ಶಿಫಾರಸ್ಸಿನಂತೆ ಗೋಕಾಕ ಜಿಲ್ಲೆಯನ್ನಾಗಿ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
“ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮೀತಿಯವರ ಮನವಿಗೆ ಸ್ಫಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಈಗಾಗಲೇ ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲಾ ಹೋರಾಟ ಸಮಿತಿ ನಿಯೋಗ ಕರೆದೊಯ್ಯಲು ಶೀಘ್ರವಾಗಿ ಸಮಯ ಕಲ್ಪಿಸಲು ಸಮಯ ನಿಗದಿಪಡಿಸಲಾಗುವದು ಎಂದು ತಿಳಿಸಿದರು.”
ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮೀತಿಯ ಅಧ್ಯಕ್ಷ ಹಾಗೂ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಬಿಪಾಟೀಲ, ಬಸವರಾಜ ಖಾನಪ್ಪನವರ, ಸಿ ಡಿ ಹುಕ್ಕೇರಿ, ವಿಶ್ವನಾಥ ಕಡಕೋಳ, ಸುರೇಶ ಜಾಧವ, ವಿಠ್ಠಲ ಮೇಳವಂಕಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ಸದಸ್ಯರು ಇದ್ದರು.