ಗೋಕಾಕ : ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ
ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ
ಗೋಕಾಕ ಮೇ 10: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕøತಿ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ಬದುಕು ಮತ್ತು ವೇಮನರ ಸಾಹಿತ್ಯ ದಿವ್ಯ ಮಾದರಿಗಳಾಗಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ಡಿ ಸಮುದಾಯವು ತನ್ನದೇಯಾದ ಛಾಪು ಮೂಡಿಸಿದ್ದು ಸಮಕಾಲಿನ ಕನ್ನಡ ನಾಡಿನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದಿರುವ ಈ ಸಮುದಾಯ ಆಳರಸರಾಗಿ, ಸಾಮಂತರಾಗಿ ಪ್ರಜಾಪಾಲನೆಯನ್ನು ಮಾಡಿದ ರೆಡ್ಡಿಗಳು ಕಾಲಾಂತರದಲ್ಲಿ ಕೃಷಿಯನ್ನೇ ಪ್ರಧಾನ ಕಾಯಕವನ್ನಾಗಿ ಆಯ್ಕೆ ಮಾಡಿಕೊಂಡು ಸಂಪದ್ಬರಿತ ಸಮಾಜದವರಾಗಿದ್ದಾರೆಂದು ಹೇಳಿದರು.
ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ವರ್ಷದಲ್ಲಿ ಒಮ್ಮೆಯಾದರೂ ಇಂತಹವರ ಸ್ಮರಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲ ಜನಾಂಗದವರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸುವಂತೆ ತಿಳಿಸಿದರು. ನಮ್ಮ ಸಮಾಜವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಸಮಾಜವನ್ನು ಗೌರವಿಸಬೇಕು. ಇದರಿಂದ ನಮ್ಮ ಘನತೆ ಹೆಚ್ಚುತ್ತದೆ ಎಂದು ಹೇಳಿದರು.
ಗೋಕಾಕ ತಾಲೂಕಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು, ಈಗಾಗಲೇ ಎಲ್ಲ ಜನಾಂಗಗಳಿಗೆ ಜಾತಿ ಆಧಾರದ ಮೇಲೆ ಅಧಿಕಾರ ನೀಡಲಾಗುತ್ತಿದೆ. ಅಲ್ಲದೇ ಎಲ್ಲ ಸಮಾಜಗಳಿಗೂ ರಾಜಕೀಯ ಪ್ರಾಶಸ್ತ್ಯ ಕೊಟ್ಟು ಸಮಾನತೆ ನೀಡಲಾಗುತ್ತಿದೆ. ರೆಡ್ಡಿ ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದರು.
ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಸುಣಧೋಳಿಯ ಶಿವಾನಂದ ಸ್ವಾಮಿಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಭೀಮಶೆಪ್ಪ ಮಳಲಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಹಣಮಂತ ಜಾಲಿಬೇರಿ, ತಹಶೀಲ್ದಾರ ಜಿ.ಎಸ್. ಮಳಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವ್ಹಿ. ಕಲ್ಲಪ್ಪನವರ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ರೆಡ್ಡಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಶಿಕ್ಷಕ ಆರ್.ಎಲ್.ಮಿರ್ಜಿ ವಿಶೇಷ ಉಪನ್ಯಾಸ ನೀಡಿದರು. ಶಿವು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುರುಘರಾಜೇಂದ್ರ ಮಹಾಸ್ವಾಮಿಗಳು,
ಶೂನ್ಯ ಸಂಪಾದನ ಮಠ :
ಗೋಕಾಕ ತಾಲೂಕಿನಲ್ಲಿ ಬಸವಣ್ಣನವರ ಅನುಭವ ಮಂಟಪದ ಆಧಾರದಲ್ಲಿ ಎಲ್ಲ ಜಾತಿಗಳನ್ನು ಒಂದುಗೂಡಿಸುವ ಕಾರ್ಯ ನಡೆಯಬೇಕಾಗಿದೆ. ಎಲ್ಲ ಸಮಾಜದವರು ಏಕತೆ ಹಾಗೂ ಸೌಹಾರ್ದಯುತವಾಗಿ ಬದುಕುತ್ತ ಸಮಾಜಕ್ಕೆ ಮಾದರಿಯಾಗಬೇಕು. ಆ ಸಮಾಜ-ಈ ಸಮಾಜ ಅನ್ನುವುದಕ್ಕಿಂತ ಎಲ್ಲ ಸಮಾಜಗಳು ಒಂದೇ ಎಂಬ ತತ್ವದಡಿ ಕೆಲಸ ನಡೆಯಬೇಕು. ಶೂನ್ಯ ಸಂಪಾದನ ಮಠದಿಂದ ಎಲ್ಲ ಜನಾಂಗದವರನ್ನು ಒಂದುಗೂಡಿಸುವ ಮಹತ್ತರ ಕಾರ್ಯಕ್ಕೆ ಅಣಿಯಾಗುತ್ತಿದ್ದೇವೆ.