ಮ್ಯಾಂಗೋ ಟ್ಯೂರಿಸಂ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕ ಹಾಗೂ ಬೆಳೆಗಾರ
ಧಾರವಾಡ : ರಾಜ್ಯದಲ್ಲಿಯೇ ಮಾದರಿಯಾಗಿ ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಇಲಾಖೆಯು ಮ್ಯಾಂಗೋ ಟ್ಯೂರಿಸಂ ಹೆಸರಿನ ನೂತನ ಕಾರ್ಯಕ್ರಮ ಆರಂಭಿಸಿದೆ.
ಕಲಕೇರಿಯ ಬಳಿಯ ದೇವೇಂದ್ರ ಜೈನರ್ ಅವರ ತೋಟಕ್ಕೆ ನಗರ ವಾಸಿಗಳನ್ನು ಇಲಾಖೆಯೇ ಕರೆದೊಯ್ದು ಅವರಿಗೆ ಗುಣಮಟ್ಟದ ಮಾವು ಪರಿಚಯಿಸಲಾಯಿತು. ತಿನ್ನಲು ಯಾವ ತಳಿ ಹಣ್ಣು ಉತ್ತಮ, ಗಿಡದಲ್ಲಿರುವ ಮಾವಿನ ಕಾಯಿಯನ್ನು ಯಾವ ಸಮಯದಲ್ಲಿ ಕೀಳಬೇಕು. ಹೇಗೆ ಕೀಳಬೇಕು, ಯಾವ ರೀತಿ ಕಾಯಿಯನ್ನು ಹಣ್ಣು ಮಾಡಬೇಕು ಎಂದು ಮಾವಿನ ಹಣ್ಣಿನ ಪ್ರಾಥಮಿಕ ಲಕ್ಷಣಗಳನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಾವು ಬೆಳೆಗಾರರು ನಗರ ವಾಸಿಗಳಿಗೆ ಮಾಹಿತಿ ಒದಗಿಸಿದರು.
ಒಳ್ಳೆಯ ಗುಣಮಟ್ಟದ ಮಾವು ಹಣ್ಣನ್ನು ಬೆಳೆಯುತ್ತಿರುವ ರೈತರನ್ನು ಗುರುತಿಸಿ,ನಗರ ಪ್ರದೇಶದ ಗ್ರಾಹಕರನ್ನು ಆಯ್ದು ಮಾವು ಬೆಳೆಗಾರರ ತೋಟಗಳಿಗೆ ಕರೆದೊಯ್ಯುವ ಕಾರ್ಯಕ್ರಮ ಇದಾಗಿದೆ.ಗ್ರಾಹಕರನ್ನು ಬೆಳೆಗಾರರ ತೋಟಗಳಿಗೆ ಕರೆದೊಯ್ಯುವ ಸಾರಿಗೆ ವೆಚ್ಚದ ಶೇ.75 ರಷ್ಟನ್ನು ಮಾವು ಅಭಿವೃದ್ಧಿ ನಿಗಮ ಭರಿಸುತ್ತಿದೆ.ಉಳಿದ ಮೊತ್ತವನ್ನು ಗ್ರಾಹಕರು ಭರಿಸಬೇಕು.ಏ.25 ರಂದು ಹಳ್ಳಿಗೇರಿ,24 ಹಾಗೂ 28 ರಂದು ಹುಬ್ಬಳ್ಳಿ ತಾಲ್ಲೂಕಿನ ಪಾಳೆ ಗ್ರಾಮದ ಮಾವು ತೋಟಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಬಿ. ದಿಡ್ಡಿಮನಿ, ಹಿರಿಯ ಅಧಿಕಾರಿಗಳಾದ ಆರ್.ಎಸ್. ಹಿರೇಮಠ, ಹೇಮಾವತಿ, ಪ್ರವೀಣ ಕಾವಟೆ, ಶ್ರಿದೇವಿ ಹಾಗೂ ಮಾವು ಬೆಳೆಗಾರರಾದ ದೇವೇಂದ್ರ ಜೈನರ್, ಬಸವರಾಜ ಗರಗ, ಧರೆಪ್ಪ ಅಜಗೊಂಡನವರ, ಕಲ್ಲಪ್ಪ ಜೈನರ, ನಾಗರಾಜ ಕುಲಕರ್ಣಿ, ಆನಂದ ಜೈನರ್ ಉಪಸ್ಥಿತರಿದ್ದರು.